ADVERTISEMENT

ಜ.15 ರಿಂದ ಸತ್ಯಸಾಯಿ ಗ್ರಾಮದಲ್ಲಿ ಕ್ರೀಡಾಕೂಟ

ನಾಲ್ಕು ದಿನಗಳ ಕಾಲ ವಿದ್ಯಾರ್ಥಿಗಳಿಂದ ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 11:20 IST
Last Updated 13 ಜನವರಿ 2020, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ‘ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜನವರಿ 15 ರಿಂದ 19ರವರೆಗೆ ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕೂಟ ಹಮ್ಮಿಕೊಳ್ಳಲಾಗಿದೆ’ ಎಂದು ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್. ನರಸಿಂಹಮೂರ್ತಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನವರಿ 15 ರಂದು ಬೆಳಗ್ಗೆ 9ಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್, ಸಂಸದ ಬಿ.ಎನ್. ಬಚ್ಚೇಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆಎಂದು ಹೇಳಿದರು.

‘ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಅಧೀನದಲ್ಲಿ ಬರುವ 17 ಜಿಲ್ಲೆಗಳ ವಿದ್ಯಾನಿವೇಶನಗಳ ವಿದ್ಯಾರ್ಥಿಗಳು ಮತ್ತು ಹೈದರಾಬಾದಿನ ಕೊಂಡಪಾಕದಲ್ಲಿ ಅಧ್ಯಯನ ಮಾಡುತ್ತಿರುವ 4,000 ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗಿಗಳಾಗುತ್ತಿದ್ದಾರೆ’ ಎಂದರು.

ADVERTISEMENT

‘ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಗಗನ ಸಾಹಸ ಕ್ರೀಡೆಗಳು, ಪ್ಯಾರಾ ಮೋಟರ್, ಬಿಸಿ ಬೆಲೂನ್‌ ಸಾಹಸ, ಕರಾಟೆ, ಕಲರಿ ಯುದ್ಧಕಲೆಯ ಪ್ರದರ್ಶನ, ಜಾರುಗಾಲಿ ಚಮತ್ಕಾರ, ಕುದುರೆ ಮತ್ತು ಮೋಟರ್ ಸೈಕಲ್ ಸವಾರಿ ಪ್ರದರ್ಶಿಸುವ ಜತೆಗೆ ವೈವಿಧ್ಯಮಯ ನೃತ್ಯಪ್ರದರ್ಶನಗಳನ್ನು ಪ್ರದರ್ಶಿಸಲಿದ್ದಾರೆ’ ಎಂದು ಹೇಳಿದರು.

‘ಜನವರಿ 15 ರಿಂದ 18ರ ವರೆಗೆ ನಿತ್ಯ ಸಂಜೆ 6ಕ್ಕೆ ಪ್ರೇಮಾಮೃತಂ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೃತ್ಯ, ಯಕ್ಷಗಾನ, ನಾಟಕ ಪ್ರದರ್ಶನಗೊಳ್ಳಲಿವೆ’ ಎಂದು ತಿಳಿಸಿದರು. ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ. ನಾರಾಯಣ ರಾವ್, ಮಾಧ್ಯಮ ಸಮಿತಿ ಸಂಚಾಲಕ ಪಿ.ವಿ. ಗೋವಿಂದ ರೆಡ್ಡಿ, ಸಮನ್ವಯಕಾರರಾದ ಕಾನ. ಸುಂದರ ಭಟ್, ಅಡ್ಕಸ್ಥಳ ಕಬೀರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.