ADVERTISEMENT

ಒತ್ತಡ ತರುವುದು ತಪ್ಪು ಎನ್ನಲಾಗದು: ಮುಷ್ಕರ ಸಮರ್ಥಿಸಿಕೊಂಡ ಸಂಸದ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 14:00 IST
Last Updated 8 ಜನವರಿ 2020, 14:00 IST
ಬಿ.ಎನ್.ಬಚ್ಚೇಗೌಡ
ಬಿ.ಎನ್.ಬಚ್ಚೇಗೌಡ   

ಚಿಕ್ಕಬಳ್ಳಾಪುರ: ‘ಇವತ್ತು ಸಮಾಜದಲ್ಲಿ ದುರ್ಬಲ ವರ್ಗದವರು ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹೀಗಾಗಿ, ದೇಶದಲ್ಲಿ ದುಡಿಮೆ ಮಾಡುವ ಜನರ ಶ್ರಮಕ್ಕೆ ತಕ್ಕಂತೆ ವೇತನ ಸಿಗುವ ಅವಕಾಶ ಸಿಗಬೇಕಿದೆ. ಕಾರ್ಮಿಕರ ಸಂಘಟನೆಗಳು ಮುಷ್ಕರದ ಮೂಲಕ ಸರ್ಕಾರದ ಮೇಲೆ ಒತ್ತಡ ತರುವುದು ತಪ್ಪು ಎನ್ನಲಾಗದು’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಗು ಅಳದೆ ಇದ್ದರೆ ತಾಯಿ ಹಾಲು ಕೊಡುವುದಿಲ್ಲ. ಹಾಗೆಯೇ ಜನರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳದಿದ್ದರೆ ಸರ್ಕಾರ ಕಣ್ಣು ತೆರೆಯುವುದಿಲ್ಲ. ಇವತ್ತು ದೇಶದಲ್ಲಿ ದುರ್ಬಲ ವರ್ಗದವರನ್ನು ಗಮನಕ್ಕೆ ತೆಗೆದುಕೊಳ್ಳಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇವತ್ತು ಖಾಸಗಿ ಕ್ಷೇತ್ರದಲ್ಲಿ ಕಾರ್ಮಿಕರ ಶೋಷಣೆಯಾಗುತ್ತಿದೆ. ಸರಿಯಾದ ಸಂಬಳ, ಸೌಲಭ್ಯಗಳು ಸಿಗುತ್ತಿಲ್ಲ. ಸಾಮಾಜಿಕ ಭದ್ರತೆ ಇಲ್ಲ. ಕಾರ್ಮಿಕ ಇಲಾಖೆಯಲ್ಲಿ ದೊಡ್ಡ ಸಮಸ್ಯೆ ಇದೆ. ಅದನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಇವತ್ತು ಜೀವನ ನಿರ್ವಹಣಾ ವೆಚ್ಚ ದುಬಾರಿಯಾಗಿದೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಆಹಾರ ಖರ್ಚು ಲೆಕ್ಕ ಹಾಕಿ, ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ಸಂಬಳ, ಪರಿಹಾರ ಸಿಗಬೇಕಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.