ಚಿಕ್ಕಬಳ್ಳಾಪುರ: ನಗರದ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಪರಿಸರ ಸ್ನೇಹಿ ಬೀಜದುಂಡೆ ಗಣಪತಿ ತಯಾರಿಕಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ನವೀನ್ ಭಟ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿರುವುದು ತುಂಬಾ ಖುಷಿಯ ವಿಷಯ. ಮಕ್ಕಳ ಪರಿಸರ ಕಾಳಜಿ ಮೆಚ್ಚುವಂತಹದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಭಾಸ್ಕರ್ ಮಾತನಾಡಿ, ‘ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿದ ವಿದ್ಯಾರ್ಥಿಗಳು ಆರು ವರ್ಷಗಳಿಂದ ಬೀಜದುಂಡೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಚಾರ. ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಹಾಗಾಗಿ ನೀವೆಲ್ಲರೂ ತಯಾರಿಸಿದ ಗಣೇಶ ಮೂರ್ತಿಯನ್ನು ಪೂಜೆ ಮಾಡಿದ ನಂತರ ಉತ್ತಮವಾದ ಜಾಗದಲ್ಲಿ ವಿಸರ್ಜಿಸುವುದರ ಮೂಲಕ ಒಂದು ಮರ ಬೆಳೆಯಲು ಅವಕಾಶ ಆಗುತ್ತದೆ’ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ವತಿಯಿಂದ ಅತ್ಯುತ್ತಮವಾಗಿ ಗಣೇಶಮೂರ್ತಿ ತಯಾರಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ವಿವಿಧ ಮಾದರಿಯ ಬೀಜದುಂಡೆ ಗಣಪತಿಗಳನ್ನು ತಯಾರಿಸಿ, ತಮ್ಮ ಸೃಜನಶೀಲತೆ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮ ರೆಡ್ಡಿ, ಬಿಜಿಎಸ್ ಆಂಗ್ಲ ಶಾಲೆಯ ಪ್ರಾಂಶುಪಾಲ ಮೋಹನ್ ಕುಮಾರ್ ಡಿ.ಸಿ., ಕ್ಷೇತ್ರ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸುನೀಲ್, ಆದಿಚುಂಚನಗಿರಿ ಸಂವಿತ್ ಶಾಲೆಯ ಶೈಕ್ಷಣಿಕ ಸಲಹೆಗಾರ್ತಿ ಕಲಾವತಿ ಕೆ.ಆರ್, ವಕೀಲ ಮಂಜುನಾಥ ರೆಡ್ಡಿ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.