ADVERTISEMENT

ಸುಧಾಕರ್ ನಿಂದಿಸಿದರೆ ಉಗ್ರ ಹೋರಾಟ

ಪತ್ರಿಕಾಗೋಷ್ಠಿ ಮೂಲಕ ಶಾಸಕ ಕೆ.ಆರ್.ರಮೇಶ್‌ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವರ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 14:19 IST
Last Updated 14 ಮಾರ್ಚ್ 2020, 14:19 IST

ಚಿಕ್ಕಬಳ್ಳಾಪುರ: ‘ಶಾಸಕ ಕೆ.ಆರ್.ರಮೇಶ್‌ ಕುಮಾರ್ ಅವರು ಸದನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ. ಇಂತಹ ಘಟನೆ ಮರುಕಳುಹಿಸಿದರೆ ಸುಧಾಕರ್‌ ಅವರ ಬೆಂಬಲಿಗರು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಬಿಜೆಪಿ ಮುಖಂಡ ಮರುಳುಕುಂಟೆ ಕೃಷ್ಣಮೂರ್ತಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯ ರಾಜಕಾರಣಿಯಾದ ರಮೇಶ್‌ ಕುಮಾರ್ ಅವರು ಕಿರಿಯರನ್ನು ಪ್ರೋತ್ಸಾಹಿಸುವ ಜತೆಗೆ ಮಾರ್ಗದರ್ಶನ ನೀಡಬೇಕು. ಆದರೆ, ಸದನದಲ್ಲಿ ಸುಧಾಕರ್ ಅವರು ಮಾತನಾಡುವ ಸಂದರ್ಭದಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ವೈಯಕ್ತಿಕ ಟೀಕೆಗೆ ಇಳಿದಿದ್ದು ಬೇಸರ ತಂದಿದೆ. ಅದು ಸಾಲದು ಎಂಬಂತೆ ಅವರ ಬೆಂಬಲಿಗರು ಸುಧಾಕರ್ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವ ವಿಚಾರವಲ್ಲ’ ಎಂದು ತಿಳಿಸಿದರು.

‘ಸುಧಾಕರ್ ಅವರು ತಮ್ಮದೇ ಆದ ಗೌರವ ಹೊಂದಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಸತತ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಸುಧಾಕರ್ ಅವರ ರಾಜಕೀಯ ಏಳಿಗೆ ಸಹಿಸದೆ ರಮೇಶ್ ಕುಮಾರ್‌ ಅವರು ಅವರನ್ನು ಅನರ್ಹಗೊಳಿಸುವ ಮೂಲಕ ರಾಜಕೀಯವಾಗಿ ಮುಗಿಸಲು ನೋಡಿದರು. ಅದು ಕೈಗೂಡದಿದ್ದಾಗ ಸದನದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ಸುಧಾಕರ್ ಅವರ ವಿರುದ್ಧ ಟೀಕೆಗೆ ಮುಂದಾಗಿರುವುದು ದುರದೃಷ್ಟ. ಇನ್ನಾದರೂ ಅವರು ಸದನದ ಗೌರವ ಎತ್ತಿ ಹಿಡಿಯುವ ರೀತಿ ನಡೆದುಕೊಳ್ಳಲಿ’ ಎಂದರು.

ADVERTISEMENT

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್‌ ಮಾತನಾಡಿ, ‘ರಮೇಶ್ ಕುಮಾರ್ ಅವರು ಸ್ಪೀಕರ್ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಅನೇಕ ಶಾಸಕರ ಭವಿಷ್ಯ ಹಾಳು ಮಾಡಲು ಪ್ರಯತ್ನಿಸಿದರು. ಆದರೆ ಮತದಾರರು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಸುಧಾಕರ್ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕೈಬಲಪಡಿಸಿದರು. ಸಚಿವರ ವಿರುದ್ಧ ರಮೇಶ್‌ ಕುಮಾರ್ ಅವರ ಬೆಂಬಲಿಗರು ನಿಂದನೆ ಮಾಡುವುದು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಣ್ಣ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ತಿರುಮಳಪ್ಪ, ಮುಖಂಡರಾದ ಮುನಿಕೃಷ್ಣ, ಮಂಜುನಾಥ್, ಮೊಹನ್, ಕೆ.ಸಿ.ವೆಂಕಟೇಶ್, ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.