ADVERTISEMENT

ಚಿಕ್ಕಬಳ್ಳಾಪುರ: ಸಾವಿರಾರು ಮೀನುಗಳ ಸಾವು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:09 IST
Last Updated 5 ಏಪ್ರಿಲ್ 2022, 4:09 IST
ಚಿಕ್ಕಬಳ್ಳಾಪುರದ ಗೋಪಾಲಕೃಷ್ಣ ಅಮಾನಿಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ದುರ್ವಾಸನೆ ಬೀರುತ್ತಿವೆ
ಚಿಕ್ಕಬಳ್ಳಾಪುರದ ಗೋಪಾಲಕೃಷ್ಣ ಅಮಾನಿಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ದುರ್ವಾಸನೆ ಬೀರುತ್ತಿವೆ   

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಗೋಪಾಲಕೃಷ್ಣ ಅಮಾನಿಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಸುತ್ತಮುತ್ತ ಕೆಟ್ಟವಾಸನೆ ಬೀರುತ್ತಿದೆ.

‘ನಗರದ ತ್ಯಾಜ್ಯಗಳು ಅದರಲ್ಲೂ ವಿಷಕಾರಿ ತ್ಯಾಜ್ಯಗಳನ್ನು ಕೆರೆಗೆ ಸುರಿಯುತ್ತಿರುವುದರಿಂದ ಕೆಲವೆಡೆ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಅಲ್ಲೆಲ್ಲಾ ಕೊಳೆತ ವಾಸನೆ ಹಬ್ಬಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದಾಗಿ ಈಗಲೂ ಕೆರೆಯಲ್ಲಿ ನೀರಿದೆ. ಆದರೆ ನಮ್ಮೂರ ಕೆರೆಯನ್ನು ನಮ್ಮೂರಿನವರೇ ತ್ಯಾಜ್ಯ ಸುರಿದು ಹಾಳುಮಾಡುತ್ತಿರುವುದು ದುರಂತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅರಿವು ಮೂಡಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಪರಿಸರಪ್ರೇಮಿ ಆಟೋ ಸುಬಾನ್ ಒತ್ತಾಯಿಸಿದ್ದಾರೆ.

ನಗರದ ಬೈಪಾಸ್ ನಲ್ಲಿರುವ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದ ಫ್ಲೈ ಓವರ್ ಕೆಳಗೆ ಮೀನುಗಳು ಸತ್ತು ತೇಲುವ ದೃಶ್ಯವನ್ನು ಕಾಣಬಹುದಾಗಿದೆ. ಈ ಬಾರಿ ಕೆರೆಯಲ್ಲಿ ನೀರು ಹೆಚ್ಚಳವಾಗಿ ದೇವಸ್ಥಾನದ ಹತ್ತಿರದವರೆಗೂ ಬಂದಿದೆ. ಸತ್ತು ಕೊಳೆತ ಮೀನುಗಳು, ಅವುಗಳಿಗೆ ಮುತ್ತಿರುವ ನೊಣಗಳು ಕಂಡರೆ ವಾಕರಿಕೆ ತರಿಸುತ್ತದೆ. ಇಲ್ಲಿ ರಸ್ತೆಯಲ್ಲಿ ಸಾಗುವವರೇ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಈ ಭಾಗದ ಮನೆಗಳವರ ದುಸ್ಥಿತಿಯಂತೂ ಹೇಳತೀರದಾಗಿದೆ. ಮನೆಯಲ್ಲಿ ಊಟ ಮಾಡಲೂ ಆಗದಂತಾಗಿದೆ. ಸಾಂಕ್ರಾಮಿಕ ರೋಗ ಹಬ್ಬುವ ಸಾಧ್ಯತೆಯೂ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.