ADVERTISEMENT

ಚಿಕ್ಕಬಳ್ಳಾಪುರ | 1,225 ಸದಸ್ಯರ ರಾಜೀನಾಮೆ ಸುಳ್ಳು

ಜಿ.ವಿ.ಶ್ರೀರಾಮರೆಡ್ಡಿ ಬೆಂಬಲಿಗರ ಹೇಳಿಕೆ ಅಲ್ಲಗಳೆದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 15:32 IST
Last Updated 19 ಜೂನ್ 2020, 15:32 IST

ಚಿಕ್ಕಬಳ್ಳಾಪುರ: ‘ಸಿಪಿಎಂರಾಜ್ಯ ಸಮಿತಿ ಸದಸ್ಯ ಚನ್ನರಾಯಪ್ಪ ಅವರು ಪಕ್ಷಕ್ಕೆ 1,225 ಸದಸ್ಯರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿರುವುದು ಸುಳ್ಳು ಹೇಳಿಕೆ. ಅವರ ಹಿಂದೆ 60 ಜನ ಕೂಡ ಇಲ್ಲ’ ಎಂದು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರಾಜಕೀಯ ಸ್ಥಾನಮಾನ ಕೈ ತಪ್ಪುವ ಆತಂಕ ಎದುರಾಗಿದ್ದ ಹಲವರು ಸಿಪಿಎಂ ಪಕ್ಷದಲ್ಲಿ ಇನ್ನೂ ಉಳಿಗಾಲವಿಲ್ಲ ಎಂದು ಅರಿತು ಪಕ್ಷದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಅಂತವರ ವಿರುದ್ಧ ಜಿಲ್ಲಾ ಸಮಿತಿ ಶಿಸ್ತು ಕ್ರಮ ಕೈಗೊಂಡಿದೆ’ ಎಂದು ಹೇಳಿದರು.

‘ಮುಗ್ಧ ಸದಸ್ಯರನ್ನು ಸಭೆಯ ನೆಪದಲ್ಲಿ ಕರೆತಂದು ರಾಜೀನಾಮೆ ನೀಡಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಜತೆಗೆ, ರಾಜೀನಾಮೆ ಯಾವ ರೀತಿ ಸಲ್ಲಿಸಬೇಕೆಂಬ ಪರಿಜ್ಞಾನವೂ ಅವರಲಿಲ್ಲ. ಸತ್ಯ ಅರಿತು ಸಾಕಷ್ಟು ಸದಸ್ಯರು ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸಿ ಸದಸ್ಯತ್ವ ನವೀಕರಿಸಿಕೊಂಡಿದ್ದಾರೆ’ ಎಂದರು.

ADVERTISEMENT

‘ಈ ಹಿಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸಿಪಿಎಂ ಪಕ್ಷದ ಹಲವರು ಕಾಂಗ್ರೆಸ್ ಜತೆಗೆ ಕೈಜೋಡಿಸಿದ್ದಾರೆ ಎಂದು ಹೇಳುವ ಮೂಲಕ ಸಿಪಿಎಂ ಪ್ರಾಮಾಣಿಕ, ಪೂರ್ಣಾವಧಿ ಕಾರ್ಯಕರ್ತರನ್ನು ತೇಜೋವಧೆ ಮಾಡಲು ಹೊರಟಿದ್ದಾರೆ. ಈ ಬಗ್ಗೆ ರಾಜ್ಯ ಸಮಿತಿ ಗಮನಕ್ಕೆ ತರಲಾಗಿದೆ’ ಎಂದು ಹೇಳಿದರು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ. ಜಯರಾಮರೆಡ್ಡಿ, ರಾಜ್ಯ ಸಮಿತಿ ಸದಸ್ಯ ಎಚ್.ಪಿ.ಲಕ್ಷ್ಮೀನಾರಾಯಣ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮಹಮ್ಮದ್ ಅಕ್ರಂ, ಜಿಲ್ಲಾ ಸಮಿತಿ ಸದಸ್ಯ ಹೇಮಚಂದ್ರ, ರವಿಚಂದ್ರರೆಡ್ಡಿ, ಅಶ್ವತ್ಥ್ ನಾರಾಯಣ್, ಬಿ.ಎನ್.ಮುನಿಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.