ADVERTISEMENT

ಗೌರಿಬಿದನೂರು: ಮನ ಸೆಳೆದ ವಿದ್ಯಾರ್ಥಿಗಳ ಹಾಡು, ನೃತ್ಯ

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲಿಕೋತ್ಸವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:20 IST
Last Updated 26 ನವೆಂಬರ್ 2022, 4:20 IST
ಗೌರಿಬಿದನೂರು ನಗರದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಮತ್ತು‌ ಕಲಿಕೋತ್ಸವವನ್ನು ಉದ್ಘಾಟನೆ ‌ಮಾಡಿದ ಗಣ್ಯರು
ಗೌರಿಬಿದನೂರು ನಗರದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಮತ್ತು‌ ಕಲಿಕೋತ್ಸವವನ್ನು ಉದ್ಘಾಟನೆ ‌ಮಾಡಿದ ಗಣ್ಯರು   

ಗೌರಿಬಿದನೂರು: 2022-23ನೇ ಸಾಲಿನ ಕಲಿಕಾ ಚೇತರಿಕೆ ಅಂಗವಾಗಿ ನಗರದ ಸರ್ಕಾರಿ ಎಸ್ಎಸ್ಇಎ ಪ್ರೌಢ ಶಾಲೆಯಲ್ಲಿ ಶುಕ್ರವಾರ ‘ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಸ್ಪರ್ಧೆ’ ಏರ್ಪಡಿಸಲಾಯಿತು. ಶಿಕ್ಷಣ ಇಲಾಖೆ ವತಿಯಿಂದ ಕಾರ್ಯಕ್ರಮ ನಡೆಯಿತು.

ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ‘ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ಇತರ ಪಠ್ಯೇತರ ಚಟುವಟಿಕೆಗಳಿಂದಲೂ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಶಾಲಾ ಹಂತದಲ್ಲಿ ನಡೆಯುವ ಪ್ರತಿಭಾ ಕಾರಂಜಿಗಳು ಸಾಕ್ಷಿಯಾಗಿವೆ’ ಎಂದು ಹೇಳಿದರು.

ಶಿಕ್ಷಕರು ಶಾಲೆಯಲ್ಲಿ ಪಠ್ಯದ ಜತೆಗೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಬೋಧಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ADVERTISEMENT

‘ಎಲ್ಲಾ ಮಕ್ಕಳಲ್ಲಿ ವಿಭಿನ್ನ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರ ತರಲು ಸೂಕ್ತ ವೇದಿಕೆ ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸಾಧನೆ ಸುಲಭವಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ’ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ ಹೇಳಿದರು.

ನಗರಸಭೆ ಆಯುಕ್ತ ಡಿ.ಎಂ. ಗೀತಾ ಮಾತನಾಡಿ, ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಕೇವಲ ಪಠ್ಯಪುಸ್ತಕಗಳ ಮೇಲೆ ಅವಲಂಬಿತವಾಗದೆ ತಮ್ಮ ಆಸಕ್ತಿಗೆ ಅನುಗುಣವಾಗಿ ಪ್ರತಿಭೆ ಪ್ರದರ್ಶಿಸಬೇಕು. ಶಾಲೆಗಳಲ್ಲಿ ಆಯೋಜಿಸುವ ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವಗಳ ಪ್ರಯೋಜನ ಪಡೆಯಬೇಕು ಎಂದರು.

ವಿದ್ಯಾರ್ಥಿಗಳಿಗೆ ನೃತ್ಯ, ಕಥೆ ಹೇಳುವ ಸ್ಪರ್ಧೆ, ಛದ್ಮವೇಷ, ಭಾವಗೀತೆ, ಭಕ್ತಿಗೀತೆಗಳ ಗಾಯನ ಸ್ಪರ್ಧೆ, ಮಣ್ಣಿನ ಮಾದರಿ ತಯಾರಿಕಾ ಸ್ಪರ್ಧೆ, ಜನಪದ ಗೀತೆ, ರಸಪ್ರಶ್ನೆ, ಕವಾಲಿ, ಘಜಲ್ ಸೇರಿದಂತೆ ‌ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದೇ ವೇಳೆ ಕ್ಷೇತ್ರ ಸಮನ್ವಯ ಅಧಿಕಾರಿ ಜಿ.ಗಂಗರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಜಿ‌. ರೆಡ್ಡಪ್ಪ, ಮುಖ್ಯ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ನರಸಿಂಹಮೂರ್ತಿ, ಶಿಕ್ಷಕ ರಾಮಚಂದ್ರಪ್ಪ, ಇಸಾಪುಲ್ಲಾ, ಬಿ. ಸಂಜೀವರಾಯಪ್ಪ, ಎನ್.ಆರ್‌. ಮಂಜುನಾಥ್, ಪಿ.ವಿ. ಸುವರ್ಣಮ್ಮ, ಗಂಗರಾಜು, ಮಂಜುಳಾ, ಎನ್. ಬಾಲಪ್ಪ, ಗಿರಿಧರ್, ಎಚ್.ಟಿ. ಶ್ರೀಧರ್, ದಾಳಪ್ಪ, ಸಿ.ಕೆ. ಆದರ್ಶ ಕುಮಾರ್, ಶಿಲ್ಪ, ಲಕ್ಷ್ಮಿ ದೇವಮ್ಮ, ಜೆ. ರವಿಕುಮಾರ್, ಎಂ. ಶಿವಪ್ರಸಾದ್ ಸೇರಿದಂತೆ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.