ADVERTISEMENT

ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ: ಸಂಸದ ಬಿ.ಎನ್.ಬಚ್ಚೇಗೌಡ

ಶಾಸಕ ಉಮೇಶ್‌ ಕತ್ತಿ ನಡೆ ಸಮರ್ಥಿಸಿಕೊಂಡ ಸಂಸದ ಬಿ.ಎನ್.ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 10:42 IST
Last Updated 2 ಜೂನ್ 2020, 10:42 IST
ಬಿ.ಎನ್.ಬಚ್ಚೇಗೌಡ
ಬಿ.ಎನ್.ಬಚ್ಚೇಗೌಡ   

ಚಿಕ್ಕಬಳ್ಳಾಪುರ: ‘ಉಮೇಶ್ ಕತ್ತಿ ಅವರು ನನ್ನನ್ನೂ ಸಚಿವನನ್ನಾಗಿ ಮಾಡಿ ಎಂದು ಕೇಳುವುದು ತಪ್ಪಾ?ರಾಜಕೀಯದಲ್ಲಿ ಕೇಳದಿದ್ದರೆ ಯಾರಾದರೂ ಕೊಡುತ್ತಾರಾ? ಸಚಿವರನ್ನಾಗಿ ಮಾಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಆಡಳಿತ ನಡೆಸುವವರನ್ನು ಕುರಿತು ಮಂತ್ರಿ ಮಾಡಿ, ರಾಜ್ಯಸಭೆ, ಲೋಕಸಭೆಗೆ ಕಳುಹಿಸಿ ಎಂದು ಕೇಳುವುದು ಸಹಜ. ಆಸೆ ಇರುವುದು ತಪ್ಪಾ? ಕೇಳಿದ್ದನ್ನೇ ವಿರೋಧ ಎನ್ನಲು ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರು ಇಡುವುದನ್ನು ವಿರೋಧಿಸುವುದು ಅನಾವಶ್ಯಕ. ದೇಶದಲ್ಲಿ ಯಾರ ಹೆಸರು ಬೇಕಾದರೂ ಎಲ್ಲಿಯಾದರೂ ಇಡಬಹುದು. ಸಾವರ್ಕರ್‌ ಹೆಸರು ಇಟ್ಟರೆ ತಪ್ಪಿಲ್ಲ. ಇದಕ್ಕಾಗಿ ರಾಜ್ಯದಲ್ಲಿ ಕೇಳುವವರು ಬೇಕಾದಷ್ಟು ಜನರಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸಾವರ್ಕರ್‌ ಅವರು ರಾಷ್ಟ್ರಕ್ಕಾಗಿ ದುಡಿದವರು. ಸ್ವಾತಂತ್ಯಕ್ಕೆ ಹೋರಾಡಿ ಜೈಲುವಾಸ ಅನುಭವಿಸಿದವರು. ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಹೆಸರಿಟ್ಟರೆ ತಪ್ಪೇನಿದೆ? ರಾಜ್ಯದವರ ಹೆಸರನ್ನಷ್ಟೇ ಇಡಬೇಕು ಎಂತ ಕಾನೂನು ಇದೆಯಾ? ಸೇತುವೆಗೆ ಸಾವರ್ಕರ್ ಹೆಸರು ಇಡಲು ನನ್ನ ಒತ್ತಾಯವಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ನ 20 ಶಾಸಕರು ಬಿಜೆಪಿ ಸೇರುತ್ತಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಹಾಗೇ ಏನೂ ಆಗುವುದಿಲ್ಲ. ಮೂರುವರೆ ವರ್ಷ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸುಭದ್ರವಾಗಿರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.