ಚೇಳೂರು: ಬೇಸಾಯದಿಂದ ಬಂಗಾರದ ಬುದುಕು ಸಾಗಿಸಬಹುದು ಎಂಬ ಕನಸು ಹೊತ್ತು ಟೊಮೆಟೊ ಬೆಳೆದ ರೈತರು ಮಾರುಕಟ್ಟೆ ಇದ್ದರೂ ವ್ಯಾಪಾರಿಗಳಿಲ್ಲದೇ ತಲೆಮೇಲೆ ಕೈಇಟ್ಟು ಕುಳಿತುಕೊಳ್ಳುವ
ಸ್ಥಿತಿ ಬಂದಿದೆ.
ಟೊಮೆಟೊಗೆ ನೆರೆಯ ರಾಜ್ಯಗಳಲ್ಲಿ ಉತ್ತಮ ಮಾರುಕಟ್ಟೆ ಸಿಗಲಿದೆ ಎಂದು ಭಾವಿಸಿ ಲಕ್ಷಾಂತರ ಬಂಡವಾಳ ಹಾಕಿ ಬೆಳೆದ ಟೊಮೆಟೊ ಇಂದು ಮಾರುಕಟ್ಟೆ ಇದ್ದರೂ ಕೊಳ್ಳುವವರಿಲ್ಲದೆ ದನ–ಕರು, ಮೇಕೆಗಳಿಗೆ
ಆಹಾರವಾಗುತ್ತಿದೆ.
ಚೇಳೂರು ಹೋಬಳಿಯ ದರವಾರಪಲ್ಲಿ ಗ್ರಾಮದ ರೈತ ಪಾತಲ ಪಿ.ಬಿ. ಕೃಷ್ಣಾರೆಡ್ಡಿ ಎಂಬವರು ನಿಮ್ಮಕಾಯಲಪಲ್ಲಿ ಗ್ರಾಮದಲ್ಲಿ ತನ್ನ 3.50ಎಕರೆ ಜಮೀನಿನಲ್ಲಿ ಸುಮಾರು ₹ 3.50 ಲಕ್ಷ ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದಾರೆ. ₹15 ಲಕ್ಷ ಲಾಭದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಇದೀಗ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲದೇ ಟೆಮೆಟೋವನ್ನು ತನ್ನ
ಜಮೀನಿನಲ್ಲಿಯೇ ಬಿಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಟೊಮೆಟೊವನ್ನು ಈ ಬಾರಿ ಹೆಚ್ಚಿನ ರೈತರು ಬೆಳೆದಿದ್ದಾರೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಟೊಮೆಟೊ ಆವಕವಾಗುತ್ತಿದೆ. ಇದರಿಂದ ಬೆಲೆ
ಪಾತಾಳಕ್ಕೆ ಇಳಿದಿದೆ.
ಟೊಮೆಟೊಗೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹4-6 ಸಿಗುತ್ತಿದೆ.
ಕೊಯ್ಲು ಮಾಡಿ ಸಾಗಿಸಿದರೆ ಸಾಗಾಟದ ಖರ್ಚೂ ಸಿಗುತ್ತಿಲ್ಲ. ಇದರಿಂದಾಗಿ ಹಲವರು ಟೊಮೆಟೊವನ್ನು ಗಿಡದಿಂದ ಕೀಳದೆ ಹಾಗೆಯೇ ಬಿಟ್ಟಿದ್ದಾರೆ. ಇನ್ನು ಕೆಲ ರೈತರು ರಸ್ತೆಯ ಬದಿಗಳಲ್ಲಿ ರಾಶಿ ಹಾಕಿ ಹೊರಟು
ಹೋಗುತ್ತಿದ್ದಾರೆ.
ಲಾಕ್ಡೌನ್ ಆದ ಪರಿಣಾಮ ಮಾರುಕಟ್ಟೆಗೆಟೊಮೆಟೊ ಸಾಗಿಸ
ಲಾಗದೇ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದು ಹೇಗೆಂದು ಕಂಗಾಲಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಇಂತಹ ರೈತರ ನೆರವಿಗೆ ಧಾವಿಸಬೇಕು ಎನ್ನುವುದು ರೈತರ ಒತ್ತಾಯ.
ಮಾರಾಟವಾಗದ ಟೊಮೆಟೊ
ಮಾರುಕಟ್ಟೆಗೆ ಚಿಂತಾಮಣಿ ಸುತ್ತಮುತ್ತ ಗ್ರಾಮಗಳಿಂದ ಟೊಮೆಟೊ ತರುವ ರೈತರು ಸೂಕ್ತ ಬೆಲೆ ಸಿಗದೇ ಹೋದಲ್ಲಿ ಹಾಗೆಯೇ ಟೊಮೆಟೊ ಬಿಟ್ಟು ಹೋಗುತ್ತಿದ್ದಾರೆ. ಹೀಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಬಾಕ್ಸ್ ಟೊಮೆಟೊ ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ ಉಳಿದಿದೆ. ಸರ್ಕಾರ ಪರಿಹಾರ ನೀಡಲಿ ಎಂದು ರೈತರ ಮನವಿ ಮಾಡಿದ್ದಾರೆ.
ಜೆ.ವಿ.ವಿ.ಚಲಪತಿ, ಚೇಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.