ಚಿಕ್ಕಬಳ್ಳಾಪುರ: ಮುಂಬೈನಿಂದ ಇತ್ತೀಚೆಗಷ್ಟೇ ಜಿಲ್ಲೆಗೆ ವಾಪಸಾಗಿರುವ ವಲಸೆ ಕಾರ್ಮಿಕರ ಪೈಕಿ ಭಾನುವಾರ ಬಾಗೇಪಲ್ಲಿ ತಾಲ್ಲೂಕಿನ 26 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 126ಕ್ಕೆ ಏರಿದೆ.
ಮಹಾರಾಷ್ಟ್ರ ರಾಜ್ಯದಿಂದ ವಾಪಾಸಾದವರಿಂದ ಜಿಲ್ಲೆಯಲ್ಲಿ ಆರು ದಿನಗಳಲ್ಲಿ ಹೊಸದಾಗಿ 99 ಕೋವಿಡ್– 19 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಭಾನುವಾರ ಬಾಗೇಪಲ್ಲಿಯಲ್ಲಿ 26 ಪ್ರಕರಣಗಳು ದೃಢಪಟ್ಟಿವೆ. ಜತೆಗೆ, ಅದೇ ಪಟ್ಟಣದ 22ನೇ ವಾರ್ಡ್ನ ಗರ್ಭಿಣಿಯೊಬ್ಬರಿಗೆ ಕೋವಿಡ್ ತಗುಲಿರುವುದು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲಾಡಳಿತ ಆ ವಾರ್ಡ್ ಸೀಲ್ಡೌನ್ ಮಾಡಲು ಮುಂದಾಗಿದೆ.
ಮುಂಬೈನಿಂದ ಮೇ 19 ರಂದು ಜಿಲ್ಲೆಗೆ ಗೌರಿಬಿದನೂರು ತಾಲ್ಲೂಕಿನ 138 ಮತ್ತು ಬಾಗೇಪಲ್ಲಿ ತಾಲ್ಲೂಕಿನ 109 ಜನರು ಸೇರಿದಂತೆ 247 ಜನರು ವಾಪಸಾಗಿದ್ದಾರೆ. ಅವರನ್ನೆಲ್ಲ ಜಿಲ್ಲಾಡಳಿತ ವಿವಿಧೆಡೆ ಕ್ವಾರಂಟೈನ್ಗೆ ಒಳಪಡಿಸಿತ್ತು.
ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಇದೀಗ ವಲಸಿಗರ ವಾಪಾಸಾತಿಯಿಂದ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೂಡ ಕೋವಿಡ್ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 75, ಚಿಕ್ಕಬಳ್ಳಾಪುರದ 9, ಚಿಂತಾಮಣಿಯ 5 ಮತ್ತು ಬಾಗೇಪಲ್ಲಿಯ 37 ಜನರು ಸೇರಿದಂತೆ 127 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಕೋವಿಡ್ನಿಂದ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ 18 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 106 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.