ADVERTISEMENT

ಚುನಾವಣಾ ರಾಜಕೀಯ; ಮೊಯಿಲಿ ಯುಗಾಂತ್ಯ

ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2024, 7:43 IST
Last Updated 9 ಏಪ್ರಿಲ್ 2024, 7:43 IST
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿಯೂ ಆದ ಚಿಕ್ಕಬಳ್ಳಾಪುರ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರ ಚುನಾವಣಾ ರಾಜಕಾರಣಕ್ಕೆ ತೆರೆ ಬಿದ್ದಿದೆ. ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಬಳ್ಳಾಪುರದಲ್ಲಿಯೇ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. 

ವೀರಪ್ಪ ಮೊಯಿಲಿ ಅವರು ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಸರಣಿಯಾಗಿ ಸೋಲು ಕಂಡರು. ನಂತರ ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ. ಆರ್‌.ಎಲ್.ಜಾಲಪ್ಪ ಅವರ ರಾಜಕೀಯ ನಿವೃತ್ತಿಯ ತರುವಾಯ ವೀರಪ್ಪ ಮೊಯಿಲಿ ಈ ಕ್ಷೇತ್ರಕ್ಕೆ ಬಂದರು.

ಜಾಲಪ್ಪ ನಿವೃತ್ತಿ ನಂತರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ವಿಚಾರದಲ್ಲಿ ‘ಕೈ’ ಪಾಳಯದಲ್ಲಿ ದೊಡ್ಡ ಜಟಾಪಟಿಯೇ ನಡೆದಿತ್ತು. ಈ ಹಗ್ಗಜಗ್ಗಾಟದಲ್ಲಿ ಮೊಯಿಲಿ ಗೆದ್ದರು. 

ADVERTISEMENT

2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರು. 3,90,500 (ಶೇ 39.9) ಮತಗಳನ್ನು ಪಡೆದು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು.  ಈ ಗೆಲುವು ನೇಪಥ್ಯಕ್ಕೆ ಸರಿದಿದ್ದ ಅವರ ರಾಜಕೀಯ ಜೀವನವನ್ನು ಪುನರುಜ್ಜೀವನಗೊಳಿಸಿತು. ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾನೂನು, ಪೆಟ್ರೋಲಿಯಂ ಸಚಿವರಾದರು. 

2014ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿದರು. 4,24,800 (ಶೇ 33.6) ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ 5,63,802 (ಶೇ 40.7) ಮತಗಳನ್ನು ಪಡೆದು ಸೋಲು ಅನುಭವಿಸಿದರು. 

ಹೀಗೆ ಮೂರು ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 

ಜಾತ್ಯತೀತವಾಗಿ ಬೆಂಬಲ: ತನ್ನ ಸಮುದಾಯದ ಮತದಾರರು ಕನಿಷ್ಠ ಮಟ್ಟದಲ್ಲಿಯೂ ಇಲ್ಲದ ಈ ಕ್ಷೇತ್ರದಲ್ಲಿ ವೀರಪ್ಪ ಮೊಯಿಲಿ ಅವರಿಗೆ ಜಾತ್ಯತೀತವಾಗಿ ಬೆಂಬಲ ವ್ಯಕ್ತವಾಗಿದೆ.

‘ಮೊಯಿಲಿ ಅವರು ಸಹ ಜಾತಿ ನೋಡದೆ ಚಿಕ್ಕಬಳ್ಳಾಪುರ ಜನರು ನನ್ನ ಬೆಂಬಲಿಸಿದರು. ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಬಳ್ಳಾಪುರ ಜನರು’ ಎಂದು ಹೇಳುತ್ತ ಭಾವುಕರಾಗುತ್ತಿದ್ದರು.

ಚಿಕ್ಕಬಳ್ಳಾಪುರದಲ್ಲಿ ತಮ್ಮ ಪುಸ್ತಕ ಲೋಕಾರ್ಪಣೆ ಆಗಬೇಕು ಎನ್ನುವ ಅವರ ಆಸೆಯು  ‘ವಿಶ್ವಸಂಸ್ಕೃತಿ ಮಹಾಯಾನ’ ಗದ್ಯಕಾವ್ಯದ ಮೊದಲ ಸಂಪುಟದ ಮೂಲಕ ಈಡೇರಿತು. 

ಮಂಗಳೂರಿನ‌ ಕದ್ರಿ‌ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ  ಡಾ.ಎಂ.ವೀರಪ್ಪ ಮೊಯಿಲಿ ರವರ ಪತ್ರಿಕಾಗೋಷ್ಠಿ –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

ಎತ್ತಿನಹೊಳೆ ರೂವಾರಿ ಎತ್ತಿನಹೊಳೆ ನೀರಾವರಿ ಯೋಜನೆ ವೀರಪ್ಪ ಮೊಯಿಲಿ ಅವರ ಕನಸಿನ ಕೂಸು ಎಂದರೂ ತಪ್ಪಾಗದು. ಚುನಾವಣೆಯ ಸಮಯದಲ್ಲಿ ಎತ್ತಿನಹೊಳೆ ವಿಚಾರವನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದರು. 

‘ಕರೆದರೆ ಬಂದು ಪ್ರಚಾರ ಮಾಡುವೆ’ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿಯೇ ಇರುವೆ. ಯಾವುದೇ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಬನ್ನಿ ಎಂದು ಕರೆದರೆ ಅವರ ಪರ ‍ಪ್ರಚಾರ ನಡೆಸುವೆ ಎಂದು ವೀರಪ್ಪ ಮೊಯಿಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.