
ಚಿಕ್ಕಬಳ್ಳಾಪುರ: ಆದಾಯ ಗಳಿಕೆಯಲ್ಲಿ ಜಿಲ್ಲೆಯ ಮುಜರಾಯಿ ದೇವಾಲಯಗಳ ಪೈಕಿ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ವಿದುರನಾರಾಯಣಸ್ವಾಮಿ ದೇವಾಲಯ ಮೊದಲ ಸ್ಥಾನದಲ್ಲಿ ಇದೆ.
ಈ ಹಿಂದಿನಿಂದಲೂ ವಿದುರನಾರಾಯಣಸ್ವಾಮಿ ದೇವಾಲಯ ಆದಾಯದಲ್ಲಿ ಮೊದಲ ಸ್ಥಾನದಲ್ಲಿಯೇ ಇರುತ್ತಿತ್ತು. ಆದರೆ ಈ ಬಾರಿ ವಾರ್ಷಿಕ ₹ 2 ಕೋಟಿ ಆದಾಯ ದಾಟಿದೆ.
ಪ್ರತಿ ವರ್ಷ ₹1.50 ಕೋಟಿಯಿಂದ ₹2 ಕೋಟಿಯೊಳಗೆ ವಿದುರಾಶ್ವತ್ಥ ದೇವಾಲಯದ ಆದಾಯ ಇರುತ್ತಿತ್ತು. ಇದೇ ಮೊದಲ ಬಾರಿ ₹2.01 ಕೋಟಿ ದಾಟಿದೆ. ಕಳೆದ ವರ್ಷ ಈ ದೇವಾಲಯದ ಆದಾಯ ₹1.93 ಕೋಟಿ ಇತ್ತು. ಆಂಧ್ರದ ಗಡಿಯಲ್ಲಿರುವ ಈ ದೇವಾಲಯಕ್ಕೆ ಭಕ್ತರ ಭೇಟಿ ಹೆಚ್ಚಿದೆ.
ಅಲ್ಲದೆ ವಿದುರಶ್ವತ್ಥವು ಕರ್ನಾಟಕ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧವಾಗಿದೆ. ರಾಜ್ಯದ ನಾನಾ ಭಾಗಗಳ ವಿದ್ಯಾರ್ಥಿಗಳು ಇಲ್ಲಿಗೆ ಶಾಲಾ ಪ್ರವಾಸಕ್ಕೆ ಬರುವರು.
ವಿದುರನಾರಾಯಣಸ್ವಾಮಿ ದೇವಾಲಯದ ಆದಾಯ ಹೆಚ್ಚಿರುವ ಕಾರಣ ಈ ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ‘ಸಪ್ತಪದಿ’ ಕಲ್ಯಾಣಕ್ಕೆ ಈ ದೇವಾಲಯವನ್ನು ಆಯ್ಕೆ ಮಾಡಲಾಗಿತ್ತು.
ಚಿಕ್ಕಬಳ್ಳಾಪುರ ತಾಲ್ಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ನಂದಿ ಗ್ರಾಮದ ಬೋಗನಂದೀಶ್ವರ ದೇವಾಲಯ ಆದಾಯದಲ್ಲಿ ಎರಡನೇ ಸ್ಥಾನ ಪಡೆದಿದೆ. ಈ ವರ್ಷ ನಂದಿ ದೇವಾಲಯಕ್ಕೆ ₹69.32 ಲಕ್ಷ ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹3 ಲಕ್ಷದಷ್ಟು ಹೆಚ್ಚಳ ಕಂಡಿದೆ. ಕಳೆದ ವರ್ಷ ವಾರ್ಷಿಕ ಆದಾಯ ₹65.86 ಲಕ್ಷವಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ವೆಂಕಟರವಣಸ್ವಾಮಿ ದೇವಾಲಯ ₹47.42 ಲಕ್ಷದ ಮೂಲಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ₹38.65 ಲಕ್ಷ ಆದಾಯ ಈ ದೇಗುಲಕ್ಕೆ ಬಂದಿತ್ತು. ಹೀಗೆ ಮುಜುರಾಯಿ ಇಲಾಖೆಯಲ್ಲಿರುವ ‘ಎ’ ಪಟ್ಟಿಯ ಈ ದೇಗುಲಗಳು ಆದಾಯ ಗಳಿಕೆಯಲ್ಲಿ ಉತ್ತಮ ಸ್ಥಾನ ಪಡೆದಿವೆ.
‘ಬಿ’ ಪಟ್ಟಿಯಲ್ಲಿರುವ ಬಾಗೇಪಲ್ಲಿ ತಾಲ್ಲೂಕಿನ ಗಡಿದಂನ ವೆಂಕಟರವಣಸ್ವಾಮಿ ದೇವಾಲಯದ ವಾರ್ಷಿಕ ಆದಾಯ ಈ ವರ್ಷ ₹33.57 ಲಕ್ಷಕ್ಕೆ ಏರಿದೆ. ಕಳೆದ ವರ್ಷ ₹26.17 ಲಕ್ಷವಿತ್ತು. ಚಿಂತಾಮಣಿ ತಾಲ್ಲೂಕಿನ ಕೈವಾರದ ಅಮರನಾರಾಣಸ್ವಾಮಿ ದೇವಾಲಯದ ಆದಾಯ ಈ ವರ್ಷ ಸ್ವಲ್ಪ ಮಟ್ಟಿಗೆ ಕುಸಿದಿದೆ. ಕಳೆದ ವರ್ಷ ಅಮರನಾರಾಯಣ ದೇಗುಲದ ಆದಾಯ ₹11.45 ಲಕ್ಷವಿತ್ತು.
ಗುಡಿಬಂಡೆ ತಾಲೂಕಿನ ಎಲ್ಲೋಡು ಆದಿನಾರಾಯಣಸ್ವಾಮಿ ದೇವಾಲಯದ ಒಟ್ಟು ಆದಾಯ ಈ ವರ್ಷ ₹15.51 ಲಕ್ಷವಿದೆ. ಕಳೆದ ವರ್ಷ ₹22.40 ಲಕ್ಷವಿತ್ತು. ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿಯ ವೆಂಕಟರವಣಸ್ವಾಮಿ ದೇವಾಲಯ ₹19.10 ಲಕ್ಷ ಆದಾಯ ಪಡೆದಿದೆ. ಕಳೆದ ವರ್ಷ ₹17.52 ಲಕ್ಷ ಆದಾಯವನ್ನು ಪಡೆದಿತ್ತು.
ಹೀಗೆ ಜಿಲ್ಲೆಯ ಮುಜರಾಯಿ ಇಲಾಖೆಗೆ ಸೇರಿದ ಬಹುತೇಕ ದೇಗುಲಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿವೆ.
ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ‘ಎ’ ದರ್ಜೆಯ 3, ‘ಬಿ’ ದರ್ಜೆಯ 4 ಹಾಗೂ ‘ಸಿ’ ದರ್ಜೆಯ 1,100 ದೇವಾಲಯಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.