ಚೇಳೂರು: ಚೇಳೂರಿನಿಂದ ಪಾಳ್ಯಕೆರೆ ಗ್ರಾಮದ ಮೂಲಕ ಮಂಡ್ಯಂಪಲ್ಲಿ, ದಿಗವನೆಟ್ಟಕುಂಟಪಲ್ಲಿ, ದೇವಳವಾರಪಲ್ಲಿ, ಸೋಮನಾಥಪುರ ಗ್ರಾಮದ ಮಾರ್ಗವಾಗಿ ಬರುತ್ತಿರುವ ಸಾರಿಗೆ ಬಸ್ ದಿಗವನೆಟ್ಟಕುಂಟಪಲ್ಲಿ ಗ್ರಾಮಕ್ಕೆ ಬರದೇ ಚೇಳೂರಿನಿಂದ ಮತ್ತೆ ಬಾಗೇಪಲ್ಲಿಗೆ ನೇರವಾಗಿ ಸಂಚಾರ ಮಾಡುತ್ತಿದೆ. ಇದರಿಂದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ ಚೇಳೂರಿಗೆ ಬಂದು ಮಾರ್ಗ ಬಿಟ್ಟು ನಿಯಮಬಾಹಿರವಾಗಿ ಹಳ್ಳಿಗಳ ಮೇಲೆ ಬರದೇ ಸಂಚಾರ ಮಾಡುತ್ತಿರುವುದು ಆ ಭಾಗದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ರಸ್ತೆ ಸಂಖ್ಯೆ–14 ಅನ್ನು ಬಿಟ್ಟು ಅನ್ಯಮಾರ್ಗದಲ್ಲಿ ಹೋಗುತ್ತಿರುವುದು ಸರಿಯಲ್ಲ. ಇದೇ ಸ್ಥಿತಿ ಮುಂದುವರಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮದ ಮುಖಂಡರಾದ ಶಾಮೀರ್, ಸುಭಾನ್, ಎಸ್.ವಿ. ನಂಜಿರೆಡ್ಡಿ, ಎನ್.ಎಸ್. ಮದ್ದಿರೆಡ್ಡಿ, ಮಂಡ್ಯಂಪಲ್ಲಿ ಎನ್. ಮಲ್ಲಿಕಾರ್ಜುನ್, ಕೆ.ವಿ. ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಚೇಳೂರಿನಿಂದ ಬಾಗೇಪಲ್ಲಿಗೆ ಮತ್ತು ಚೇಳೂರಿನಿಂದ ಚಿಂತಾಮಣಿ ಮಾರ್ಗಗಳಲ್ಲಿ ಸಂಚರಿಸುವ ಸರ್ಕಾರಿ ಕೆಂಪು ಬಸ್ಗಳು ಮಾಯವಾಗಿವೆ. ಈ ಕೇಂದ್ರದಿಂದ ಬೆಳಿಗ್ಗೆ ಚಿಂತಾಮಣಿ ಕಡೆಗೆ ಎರಡು ಬಸ್ಗಳು ಮತ್ತು ಬಾಗೇಪಲ್ಲಿ ಕಡೆ ಎರಡು, ಆಂಧ್ರಪ್ರದೇಶದ ತಿರುಪತಿ ಕಡೆ ಒಂದು ಬಸ್ ಸಂಚರಿಸುತ್ತದೆ.ಈ ಬಸ್ಗಳು ಬಿಟ್ಟರೆ ಹಗಲೆಲ್ಲಾ ಸರ್ಕಾರಿ ಬಸ್ಗಳು ಕಾಣುವುದೇ ಇಲ್ಲ.
ಸೂರ್ಯೋದಯಕ್ಕೆ ಮುನ್ನ ಕಾಣಿಸಿ ಮಾಯವಾಗಿ, ಖಾಸಗಿ ಬಸ್ಗಳು ಹಗಲೆಲ್ಲಾ ತಿರುಗಾಡುತ್ತಿರುತ್ತವೆ. ಅಧಿಕಾರಿಗಳು ಏಕೆ ಈ ಬಸ್ಗಳನ್ನು ಚೇಳೂರು, ಪಾತಪಾಳ್ಯ, ಪಾಳ್ಯಕೆರೆ, ಬಿಳ್ಳೂರು ಮತ್ತಿತರ ಕಡೆಗಳಿಗೆ ಹಾಕಿಲ್ಲ. ಬಸ್ಗಳಿಲ್ಲದೆ ಪ್ರಯಾಣಿಕರು ತುಂಬಾ ತೊಂದರೆಪಡುತ್ತಿದ್ದಾರೆ. ಇಂದಿಗೂ ಕಾಲುದಾರಿಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.