ADVERTISEMENT

ಸಚಿವ ಸುಧಾಕರ್‌ ಬಂದಿದಕ್ಕೆ ‘ಜೀರೊ ಟ್ರಾಫಿಕ್’: ಜನರ ಆಕ್ರೋಶ

ಬಾಗೇಪಲ್ಲಿ: ಹೆಚ್ಚುತ್ತಿದೆ ವಾಹನ ದಟ್ಟಣೆ; ಸಾರ್ವಜನಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 4:41 IST
Last Updated 14 ಆಗಸ್ಟ್ 2020, 4:41 IST
ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ
ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ   

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ನಿತ್ಯವೂ ಸಾರ್ವಜನಿಕರು ಸುಗಮ ಸಂಚಾರಕ್ಕೆ ತೊಂದರೆ ಪಡುವಂತಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಮಾತ್ರ ಪೊಲೀಸರು ರಸ್ತೆಗಿಳಿದು ಸಂಚಾರ ನಿಯಂತ್ರಣದಲ್ಲಿ ತೊಡಗುತ್ತಾರೆ. ‘ಇದು ಸರಿಯೇ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

‘ನಗರಕ್ಕೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಬರುತ್ತಾರೆ ಎಂದು ಪೊಲೀಸರು ಪಟ್ಟಣದ ಮುಖ್ಯರಸ್ತೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಿ, ಜೀರೊ ಟ್ರಾಫಿಕ್ ಮಾಡಿದ್ದರು. ಆದರೆ, ನಿತ್ಯ ಮುಖ್ಯರಸ್ತೆಯಲ್ಲಿನ ವಾಹನ ದಟ್ಟಣೆ ಸಮಸ್ಯೆ ಬಗ್ಗೆ ಮಾತ್ರ ಪೊಲೀಸರು ಗಮನ ಹರಿಸುವುದಿಲ್ಲ. ಪಾದಚಾರಿ ಮಾರ್ಗ ಒತ್ತುವರಿ, ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ರಸ್ತೆ ಮಧ್ಯೆ ಜನರು ಸಂಚರಿಸುತ್ತಿದ್ದರೂ ಪೊಲೀಸರು ಗಮನ ಹರಿಸುವುದಿಲ್ಲ’ ಎಂದು ಹಿರಿಯ ನಾಗರಿಕ ಕಾರಕೂರಪ್ಪ ದೂರುತ್ತಾರೆ.

ಸಂಜೆ 4 ಗಂಟೆಗೆ ಸಚಿವರು ಬರುವ ಕಾರ್ಯಕ್ರಮವಿತ್ತು. ಮಧ್ಯಾಹ್ನ 12 ಗಂಟೆಯಿಂದಲೇ ಸಿವಿಲ್ ನ್ಯಾಯಾಲಯದ ಮುಂಭಾಗದಿಂದ ಡಾ.ಎಚ್.ಎನ್. ವೃತ್ತದವರೆಗೂ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯನ್ನು ಟ್ರಾಫಿಕ್ ನಿಯಂತ್ರಣ ಮಾಡಲು ನಿಯೋಜಿಸಲಾಗಿತ್ತು.

ADVERTISEMENT

ಪಟ್ಟಣದ ಮುಖ್ಯರಸ್ತೆಯಲ್ಲಿನ ಸಾರಿಗೆ ಬಸ್ ನಿಲ್ದಾಣದಿಂದ ಕುಂಬಾರಪೇಟೆ ವೃತ್ತದವರೆಗೂ ವ್ಯಾಪಾರ ವಹಿವಾಟುಗಳು ನಡೆಯುತ್ತದೆ. ನಿತ್ಯ ಸಾವಿರಾರು ಜನ ಒಂದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ, ಬೀದಿಬದಿ ವ್ಯಾಪಾರಿಗಳು ಹೂವು, ಹಣ್ಣು, ತರಕಾರಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ದ್ವಿಚಕ್ರ ವಾಹನಗಳ ಸವಾರರು ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸುತ್ತಿದ್ದಾರೆ. ರಸ್ತೆಯಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸದೆ ಅಡ್ಡಾದಿಡ್ಡಿಯಾಗಿ ಚಲಿಸುತ್ತಾರೆ. ಇದಾವುದರ
ಅರಿವು ಇಲ್ಲಿನ ಪೊಲೀಸರಿಗೆ ಇಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.