
ಬಾಗೇಪಲ್ಲಿ: ತಾಲ್ಲೂಕಿನ ಹೊರವಲಯದ ಚಿನ್ನೇಪಲ್ಲಿ ಕ್ರಾಸ್ ಬಳಿಯ ಖಾಲಿ ನಿವೇಶನವನ್ನು ಪಟ್ಟಣದ ಅರ್ಹ ನಿವೇಶನ, ಮನೆ ರಹಿತರಿಗೆ ವಿತರಿಸಬೇಕು ಎಂದು ಒತ್ತಾಯಿಸಿ ಶನಿವಾರ ಭಾರತ ಮಾರ್ಕ್ಸ್ವಾದಿ, ಲೆನಿನ್ವಾದಿ ಪಕ್ಷ (ರೆಡ್ ಫ್ಲಾಗ್) ನೇತೃತ್ವದಲ್ಲಿ ಅಖಿಲ ಭಾರತ ಕಿಸಾನ್ ಸಂಘಟನೆ, ಅಂಬೇಡ್ಕರ್ ಹಮಾಲಿ, ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಟ್ರೇಡ್ ಯುನಿಯನ್ ಸೆಂಟರ್ ಆಫ್ ಇಂಡಿಯಾದ ಮುಖಂಡರು, ಮಹಿಳೆಯರು ಪಾತಬಾಗೇಪಲ್ಲಿಯಲ್ಲಿ ಪ್ರತಿಭಟನೆ ಮಾಡಿದರು.
ಪಾತಬಾಗೇಪಲ್ಲಿಯಲ್ಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಲಿಲ್ಲ. ಸಮಸ್ಯೆಗಳು ಏನೇ ಇದ್ದರೂ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ. ಈ ಜಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಲ್ ಇನ್ಸ್ಪೆಕ್ಟರ್ ಅಜಯ್ಸಾರಥಿ ತಿಳಿಸಿದರು. ‘ಈ ಜಾಗದಲ್ಲಿ ಪ್ರತಿಭಟನೆ ಮಾಡಲು ಬಂದಿದ್ದೇವೆ. ಇಲ್ಲಿಂದ ಹೋಗಲ್ಲ’ ಎಂದು ಪ್ರತಿಭಟನಾಕಾರರು ತಿಳಿಸಿದಾಗ, ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ನಂತರ ಪ್ರತಿಭಟನಕಾರರು ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಪುರಸಭೆವರೆಗೆ ಡಿವಿಜಿ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು. ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದರು. ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಅಖಿಲ ಭಾರತ ಕಿಸಾನ್ ಸಂಘಟನೆ ರಾಜ್ಯ ಸಂಚಾಲಕ ಕೆ.ವಿ.ರಾಮಚಂದ್ರ ಮಾತನಾಡಿ, ‘ಪಟ್ಟಣದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವವರು ಕೃಷಿ ಕೂಲಿಕಾರ್ಮಿಕರಾಗಿ, ಸಣ್ಣ ವ್ಯಾಪಾರ ಮಾಡಿಕೊಂಡಿದ್ದಾರೆ. ಕೆಲವರು ನಿವೇಶನ ಪಡೆಯಲು ಕೈಬರಹದ ಅರ್ಜಿ ನೀಡಿ ವರ್ಷ ಕಳೆದಿದೆ’ ಎಂದರು.
‘ನಿವೇಶನ ರಹಿತರಿಗೆ ಪಟ್ಟಣದ ಹೊರವಲಯದ ಪಾತಬಾಗೇಪಲ್ಲಿಯಲ್ಲಿ 25 ಎಕರೆ ಮೀಸಲು ಇಡಲಾಗಿದೆ. ಸ್ಥಳವನ್ನು ಕಾಯ್ದಿರಿಸಿ ಪುರಸಭೆ ವ್ಯಾಪ್ತಿಗೆ ನೀಡಿದ್ದಾರೆ. ಇದುವರೆಗೂ ಪುರಸಭೆ ಅಧಿಕಾರಿ, ಕಂದಾಯ ಇಲಾಖೆಯವರು ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ. ಜನರಿಗೆ ಸುಳ್ಳು ಹೇಳಿ ಕೆಲ ಅಧಿಕಾರಿ, ದಲ್ಲಾಳಿಗಳು ಲಕ್ಷಾಂತರ ಹಣ ವಸೂಲಿ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ, ಅರ್ಹ ಫಲಾನುಭವಿಗಳಿಗೆ ನಿವೇಶನ, ಮನೆ ಹಂಚಿಕೆ ಮಾಡಬೇಕು. ಇಲ್ಲವಾದರೆ ಕಚೇರಿ ಮುಂದೆ ಪ್ರತಿಭಟಿಸಲಾಗುವುದು’ ಎಂದು ತಿಳಿಸಿದರು.
ತಾಲ್ಲೂಕು ಸಮಿತಿ ಪ್ರಧಾನಕಾರ್ಯದರ್ಶಿ ಆರ್.ಎಂ.ಚಲಪತಿ ಮಾತನಾಡಿ, ‘ಜನರಿಗೆ ನಿವೇಶನ, ಮನೆ ಹಂಚಿಕೆ ಮಾಡಲಾಗುವುದು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ಮೂಲಕ ಹೇಳಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. 40 ವರ್ಷಗಳಿಂದ ಸಾಗುವಳಿ ಮಾಡಿದವರು ಅರ್ಜಿ ನಮೂನೆ 50, 53, 57ರಲ್ಲಿ ಭರ್ತಿ ಮಾಡಿ ಸಲ್ಲಿಸಿದರೂ ಸಾಗುವಳಿ ಚೀಟಿ ವಿತರಿಸಿಲ್ಲ’ ಎಂದರು.
ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ನಿರತ ಮಹಿಳೆಯರು ಊಟ ಸಿದ್ಧಪಡಿಸಲು ಸಿದ್ಧತೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಊಟ ಸಿದ್ಧಪಡಿಸಲು ಅವಕಾಶ ನೀಡಲಿಲ್ಲ. ಇದರಿಂದ ಪೊಲೀಸರ, ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿ, ಪಾತಬಾಗೇಪಲ್ಲಿಯಲ್ಲಿ ನಿವೇಶನ ಹಂಚಿಕೆಗೆ ಜಾಗ ಮೀಸಲು ಇಡಲಾಗಿದೆ. ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ, ಸರ್ಕಾರದ ಅನಮೋದನೆ ಪಡೆಯಬೇಕಾಗಿದೆ. ಅನುಮೋದನೆ ನೀಡಿದ ಬಳಿಕ ಅರ್ಹ ಫಲಾನುಭವಿಗಳಿಗೆ ನಿವೇಶನಗಳು ಹಂಚಿಕೆ ಮಾಡಲಾಗುವುದು ಎಂದರು.
ಟ್ರೇಡ್ ಯುನಿಯನ್ ಸೆಂಟರ್ ಆಫ್ ಇಂಡಿಯಾ ಮುಖಂಡ ಮುಜಮುಲ್ಲ, ರಾಮರೆಡ್ಡಿ, ಆದಿಶೇಷು, ವೆಂಕಟರವಣಪ್ಪ, ಸಿ.ವೆಂಕಟರವಣಪ್ಪ, ಶಿವಪ್ಪ, ರಘುನಾಥರೆಡ್ಡಿ, ವೆಂಕಟರವಣಪ್ಪ, ಶಂಕರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.