
ಚಿಕ್ಕಬಳ್ಳಾಪುರ: ಮಾನವ ಕುಲಕ್ಕೆ ಜೀವನದ ಸತ್ಯ ಏನು ಎಂಬುದನ್ನು ಅಧ್ಯಾತ್ಮಿಕವಾಗಿ ತಿಳಿಸಿದ ಕೈವಾರದ ಯೋಗಿನಾರೇಯಣ ಯತೀಂದ್ರರು ಸಮಾಜಕ್ಕೆ ದಾರಿ ದೀಪವಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಯೋಗಿನಾರೇಯಣ ಯತೀಂದ್ರರ ಜಯಂತಿಯಲ್ಲಿ ಮಾತನಾಡಿದರು.
ಜಿಲ್ಲೆಯವರೇ ಆದ ಅಮರನಾರೇಯಣ ಯತೀಂದ್ರರು, ಕಾಲಜ್ಞಾನಿ, ಸಾಮಾಜಿಕ ಸುಧಾರಕ, ಶ್ರೇಷ್ಠ ಸಂತರು ಎಂದೇ ಅಜರಾಮರರಾಗಿದ್ದಾರೆ. ಎಲ್ಲ ಸಮುದಾಯವರು ಅವರ ಅನುಯಾಯಿಗಳಾಗಿದ್ದಾರೆ. ಅವರ ತತ್ವ, ಆದರ್ಶ, ವಿಚಾರಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಎಂಬ ಮಹೋನ್ನತ ಉದ್ದೇಶದಿಂದ ಸರ್ಕಾರ ಅಧಿಕೃತವಾಗಿ ತಾತಯ್ಯನವರ ಜಯಂತಿ ಆಚರಿಸುತ್ತದೆ ಎಂದರು.
ಸಮುದಾಯದ ಮುಖಂಡ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಇಡೀ ವಿಶ್ವಕ್ಕೆ ಕಾಲಜ್ಞಾನ ನೀಡಿದ ಸಿದ್ಧಿ ಪುರುಷ ಕೈವಾರ ತಾತಯ್ಯ ಅವರು. ಅವರ ಕೊಡುಗೆಗಳನ್ನು ಗುರುತಿಸಿ ಅಧಿಕೃತವಾಗಿ ಸರ್ಕಾರದಿಂದ ಜಯಂತಿಯನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಮುಂದಿನ ವರ್ಷ ತಾತಯ್ಯನವರ ಜಯಂತಿಯನ್ನು ಸಂಭ್ರಮ ಮತ್ತು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಸಮುದಾಯದ ಮುಖಂಡ ನರಸಪ್ಪ ಮಾತನಾಡಿ, ಕೈವಾರ ತಾತಯ್ಯ ಎಂದೇ ಖ್ಯಾತಿಯಾಗಿರುವ ಯೋಗಿ ನಾರೇಯಣರ ಪವಾಡಗಳು ಜನಮಾನಸದಲ್ಲಿ ಅಚ್ಚಳಿದಿಲ್ಲ. ಇದಕ್ಕೆ ಅವರಲ್ಲಿದ್ದ ಪ್ರಖರ ಜ್ಞಾನಶಕ್ತಿಯೇ ಕಾರಣ ಎಂದು ಬಣ್ಣಿಸಿದರು.
ಸಮುದಾಯದ ಮುಖಂಡ ವೆಂಕಟಪ್ಪ, ತಾತಯ್ಯನವರ ಜೀವನ ಚರಿತ್ರೆಯ ಕುರಿತು ವಿವರಿಸಿದರು.
ನಾರಾಯಣಸ್ವಾಮಿ ಹಾಗೂ ಶಾರದಾ ಮಠದ್ ತಂಡದಿಂದ ಕೈವಾರ ತಾತಯ್ಯ ಅವರು ರಚಿಸಿರುವ ಕೀರ್ತನೆಗಳನ್ನು ಹಾಡಲಾಯಿತು. ಬಲಿಜ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸಮುದಾಯದ ಮುಖಂಡರಾದ ಶ್ರೀಧರ್ ಬಾಬು, ನರಸಿಂಹಮೂರ್ತಿ, ಡ್ಯಾನ್ಸ್ ಶ್ರೀನಿವಾಸ್, ಕೃಷ್ಣಮೂರ್ತಿ, ಆನಂದ್, ಮೊಬೈಲ್ ಬಾಬು, ಮಧುಚಂದ್ರ, ನಾರಾಯಸ್ವಾಮಿ, ಅಚ್ಯುತ್, ನಾಗಭೂಷಣ್, ದೇವರಾಜು, ಕೃಷ್ಣಪ್ಪ, ವೆಂಕಟೇಶ್, ಮಲ್ಲಿಕಾರ್ಜುನ್, ಮಂಗಳಪ್ರಕಾಶ್, ನಾರಾಯಣಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.