ADVERTISEMENT

ಅತಿವೃಷ್ಟಿ ನಷ್ಟ ಸಮೀಕ್ಷೆಗೆ ದೇವೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:22 IST
Last Updated 17 ಸೆಪ್ಟೆಂಬರ್ 2013, 8:22 IST

ಚಿಕ್ಕಮಗಳೂರು: ಅತಿವೃಷ್ಟಿಯಿಂದ ರಾಜ್ಯದ ಕೆಲವು ಕಡೆ ಅಪಾರ ಹಾನಿ­ಯಾಗಿದ್ದರೆ,  ಅನಾವೃಷ್ಟಿ­ ಯಿಂದಲೂ  ತೊಂದರೆಯಾಗಿ  ಕೆಲವು ಕಡೆ ಕುಡಿ­ ಯುವ ನೀರಿನ  ಸಮಸ್ಯೆ ಎದುರಾಗಿದೆ. ಸರ್ಕಾರ ನಷ್ಟದ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ಜೆಡಿಎಸ್‌ ಜಿಲ್ಲಾ ಘಟಕ ಎಮ್ಮೆದೊಡ್ಡಿ ಘಟನೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ­ಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿ­ಸಿದ್ದ ಅವರು ಮಾಧ್ಯಮ ಪ್ರತಿನಿಧಿ­ಗಳೊಂದಿಗೆ ಮಾತನಾಡಿದರು.

‘ಬಿಜೆಪಿ ರೈತರು, ಕಾಂಗ್ರೆಸ್‌ ರೈತರು ಹಾಗೂ ಜೆಡಿಎಸ್‌ ರೈತರೆಂದು ಪ್ರತ್ಯೇಕವಾಗಿ ಕಾಣಿಸುವುದಿಲ್ಲ. ನನಗೆ ರೈತರೆಲ್ಲರೂ ಒಂದೆ. ಸುಮಾರು ಏಳೆಂಟು ಜಿಲ್ಲೆಗಳಲ್ಲಿ ತೆಂಗು ನಾಶವಾಗಿ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಇದು ಬಿಜೆಪಿಯವರ ಕಣ್ಣಿಗೆ ಕಾಣಿಸು­ತ್ತಿಲ್ಲ.

ಹಾಗಾಗಿ ತೆಂಗು ಬೆಳೆಗಾರರ ಬಗ್ಗೆ ಅವರು ಧ್ವನಿ ಎತ್ತುತ್ತಿಲ್ಲ. ಕರಾವಳಿ, ಶಿವಮೊಗ್ಗ ಸೇರಿದಂತೆ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬೆಳೆಗಾರರ ಪರ ಹೋರಾಡುತ್ತೇನೆ’ ಎಂದರು.

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಘಟನೆಯಲ್ಲಿ ಪೊಲೀಸರು ಅನ­ವಶ್ಯಕ­ವಾಗಿ ಮಧ್ಯ ಪ್ರವೇಶ ಮಾಡಿದ್ದಾರೆ. ರೈತರು ಸಾಗುವಳಿ ಮಾಡಿರುವುದು ಅರಣ್ಯ ಭೂಮಿಯಲ್ಲ. ಅಮೃತಮಹಲ್‌ ಕಾವಲು ಭೂಮಿ ಅದು. ಅರಣ್ಯ ಭೂಮಿ ಒತ್ತುವರಿಗೂ ಇದಕ್ಕೂ ತಳುಕು ಹಾಕು­ವುದು ಬೇಡ.  ಹಾಸನದಲ್ಲಿ ದೇವೇ­ಗೌಡರ ಸೊಂಟ ಮುರಿ­ಯುವುದಾಗಿ ಕಾಂಗ್ರೆಸ್‌ ನಾಯಕರು ಹೇಳಿ­ಕೊಂಡಿ­ದ್ದರು. ಅದಕ್ಕೆ ಪೂರಕವಾಗಿ ಎಮ್ಮೆದೊಡ್ಡಿ ಪ್ರಕರಣ ಬಳಸಿಕೊಂಡು, 32 ಮಂದಿ ರೈತರನ್ನು ಘನ ಸರ್ಕಾರ ಬಂಧಿಸಿದೆ. ನಾವು ಇದಕ್ಕೆಲ್ಲ ವಿಚಲಿತರಾಗುವುದಿಲ್ಲ. ಸೊಂಟ ಮುರಿಯುವುದನ್ನು ತಡೆಗಟ್ಟಲು ಜನರು ಇದ್ದಾರೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.