ನರಸಿಂಹರಾಜಪುರ: ಪಟ್ಟಣದಲ್ಲಿ ಅನಾಥರಾಗಿರುವ ವೃದ್ಧರೊಬ್ಬರನ್ನು ಸಲಹುವ ಮೂಲಕ ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಜುಬೇದ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ಪಟ್ಟಣದ ಬಾವಿಹಟ್ಟಿನ 81 ವರ್ಷ ವಯಸ್ಸಿನ ನಾಗರಾಜ್ 10 ವರ್ಷಗಳಿಂದಲೂ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು. ಅಲ್ಲದೆ, ಅವರು ಪಾರ್ಶ್ವವಾಯುವಿಗೂ ತುತ್ತಾಗಿದ್ದರು. ಒಂದು ತಿಂಗಳ ಹಿಂದೆ ಇವರಿಗೆ ಅಪಘಾತವಾಗಿ ರಸ್ತೆ ಬದಿ ಬಿದ್ದಿದ್ದರು. ಅಪಘಾತ ಮಾಡಿದವರು ಯಾರೆಂದು ತಿಳಿದಿರಲಿಲ್ಲ. ಇದನ್ನು ಗಮನಿಸಿದ ಜುಬೇದ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ವೈದ್ಯರಿಂದ ಚಿಕಿತ್ಸೆ ಕೊಡಿಸಿ ಅವರ ಆರೈಕೆ ಮಾಡುವ ಕೆಲಸ ಮಾಡಿದರು.
ಅಪಘಾತವಾದಾಗ ನಿತ್ರಾಣ ಸ್ಥಿತಿಯಲ್ಲಿದ್ದ ನಾಗರಾಜ್ ಪ್ರಸ್ತುತ ಗುಣಮುಖವಾಗಿದ್ದಾರೆ. ಆದರೆ, ಅವರು ಓಡಾಡಲು ಸಾಧ್ಯವಾಗದೆ ಮಲ, ಮೂತ್ರವನ್ನು ಮಲಗಿದಲ್ಲಿಯೇ ಮಾಡಿಕೊಳ್ಳುತ್ತಾರೆ. ಇದರ ಸ್ವಚ್ಛತೆಗೆ ನ್ಯಾಫಿಕ್ ಅಳವಡಿಕೆ, ಊಟ– ತಿಂಡಿ ಇತ್ಯಾದಿಗೆ ಪ್ರತಿ ನಿತ್ಯ ₹ 250ಕ್ಕೂ ಹೆಚ್ಚು ವೆಚ್ಚ ತಗಲುತ್ತಿದ್ದು ಇವೆಲ್ಲವನ್ನೂ ಸಹ ತಾವೇ ಭರಿಸುತ್ತಿದ್ದಾರೆ. ಒಂದೂವರೆ ತಿಂಗಳಿನಿಂದಲೂ ಪ್ರತಿ ನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಜುಬೇದ ಅವರು ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುವ ಕೆಲಸ ಮಾಡಿದ್ದರು. ಹಲವು ರೀತಿ ಸಮಾಜ ಕಾರ್ಯ ಮಾಡುತ್ತಿರುವ ಜುಬೇದ ಅವರ ಸಮಾಜಮುಖಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.