ADVERTISEMENT

ಅಪಘಾತ ವಿಮಾ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:16 IST
Last Updated 4 ಏಪ್ರಿಲ್ 2013, 8:16 IST

ಕೊಪ್ಪ: ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ (ಮ್ಯೋಮ್ಕೊಸ್) ಕಾರ್ಮಿಕ ವಿಮೆ ಯೋಜನೆಯಡಿ ಅಪಘಾತ ವಿಮಾ ಪರಿಹಾರ ಧನವನ್ನು ಫಲಾನುಭವಿಗಳಿಗೆ ಮಂಗಳವಾರ ವಿತರಿಸಲಾಯಿತು.

ಅಡಿಕೆ ತೋಟದಲ್ಲಿ ಕೆಲಸ ಮಾಡುವಾಗ ಪೆಟ್ಟು ಮಾಡಿಕೊಂಡಿರುವ ಬೇಳೆಗದ್ದೆಯ ಬಿ.ಜಿ.ಯಾದವ್ ಮತ್ತು ಮೇಲ್ಪಾಲ್‌ನ ಎಚ್.ವಿ.ಶ್ರಿಧರ್ ಅವರ ತೋಟದ ಕಾರ್ಮಿಕ ಚೆನ್ನಯ್ಯ ಇವರಿಗೆ ತಲಾ 10 ಸಾವಿರ ರೂ.ಗಳನ್ನು ಸಂಘದ ನಿರ್ದೇಶಕರಾದ ಬಿ.ಸಿ. ನರೇಂದ್ರ ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಗತಿಯ ಬಗ್ಗೆ ವಿವರಣೆ ನೀಡಿದ ಅವರು, ಸಂಘ ಪ್ರಸಕ್ತ ಸಾಲಿನಲ್ಲಿ 19,789 ಮೂಟೆ ಅಡಿಕೆಯನ್ನು ರೈತರಿಂದ ಖರೀದಿಸಿದ್ದು, 20,070 ಮೂಟೆ ಮಾರಾಟ ಮಾಡಲಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ 37 ಸ್ಪ್ರೇಯರ್‌ಗಳನ್ನು ವಿತರಿಸಲಾಗಿದ್ದು, 28 ಮಂದಿಗೆ ಅಡಿಕೆ ಒಲೆ ಖರೀದಿಗೆ ತಲಾ ರೂ. 750 ಸಹಾಯಧನ ನೀಡಲಾಗಿದೆ ಎಂದರು.

6 ಜನರಿಗೆ ತಲಾ 6 ಸಾವಿರ ರೂ. ಮೌಲ್ಯದ ಡ್ರೈಯರ್‌ಗಳನ್ನು ಉಚಿತವಾಗಿ ನೀಡಲಾಗಿದೆ. 982 ಮದಿ ಸದಸ್ಯರಿಗೆ ಗುಂಪು ವಿಮೆ ಮಾಡಿಸಲಾಗಿದ್ದು, ಯಶಸ್ವಿನಿ ವಿಮಾ ಯೋಜನೆಯಡಿ 261 ಸದಸ್ಯರನ್ನು ನೋಂದಣಿ ಮಾಡಿಸಲಾಗಿದೆ. ಅಂತ್ಯಸಂಸ್ಕಾರ ನಿಧಿಯಿಂದ 20 ಮೃತ ಸದಸ್ಯರ ಕುಟುಂಬಕ್ಕೆ ತಲಾ 500 ರೂ. ನೀಡಲಾಗಿದೆ ಎಂದರು.

ಸದಸ್ಯರಿಗೆ ಒಟ್ಟು 3,93,02,377 ರೂ. ಕಟಾವು ಸಾಲ ಹಾಗೂ ರೂ. 4, 28,86,166 ರೂ. ಅಡಿಕೆ ಆಧಾರ ಸಾಲ ನೀಡಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ 2210 ಮೂಟೆ ಅಧಿಕ ಖರೀದಿ ಮತ್ತು 1757 ಮೂಟೆ ಅಡಿಕೆ ಅಧಿಕ ಮಾರಾಟವಾಗಿದೆ ಎಂದರು.
ಸಂಘದ ನಿರ್ದೇಶಕರಾದ ಎಚ್.ಟಿ. ಸುಬ್ರಹ್ಮಣ್ಯ, ಪಿ.ಎನ್. ಶಶಿಧರ್ ವ್ಯವಸ್ಥಾಪಕ ಕುಮಾರ್ ಮುಂತಾ ದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.