ಹೊರನಾಡು(ಕಳಸ): ಹೋಬಳಿಯ ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಸ್ಥಳಾಂತರದ ಭೀತಿ ಮೂಡಿಸಿರುವ ಇನಾಂ ಭೂಮಿ ವಿವಾದ ಬಗೆಹರಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ವಿವಾದಿತ ಭೂ ಪ್ರದೇಶದಲ್ಲಿ ವಾಸಿಸುವ ಜನರು ಒಕ್ಕಲೇಳ ಬೇಕಾದ ಬಗ್ಗೆ ಭಯ ಪಡುವ ಅಗತ್ಯ ಇಲ್ಲ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇನಾಂ ವಿವಾದದ ಕುಣಿಕೆಯಿಂದ ಕೃಷಿಕರನ್ನು ತಪ್ಪಿಸಲು ಸರ್ಕಾರ ತಕ್ಕುದಾದ ಹೆಜ್ಜೆ ಇಡಲಿದೆ. ಜನರು ಆತಂಕದಿಂದ ಯಾವುದೇ ದುಡುಕಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೀವರಾಜ್ ಮಾತನಾಡಿ, ಸರ್ಕಾರ ಮಾಡಬೇಕಾದ ಸಮುದಾಯದ ಅಭಿವೃದ್ಧಿ ಕೆಲಸವನ್ನುಧರ್ಮಕ್ಷೇತ್ರಗಳು ಮಾಡು ತ್ತಿವೆ. ಹೊರನಾಡು ಕೂಡ ಗ್ರಾಮೀಣಾಭಿವೃದ್ಧಿ ಯೋಜನೆ ಮುಖಾತರ ಮಾದರಿಯಾದ ಚಟುವಟಿಕೆ ನಡೆಸುತ್ತಿದೆ ಎಂದು ಶ್ಲಾಘಿಸಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಹೊರ ನಾಡು ದೇವಸ್ಥಾನದ ಸಮಾಜಮುಖಿ ಕಾರ್ಯ ಚಟುವಟಿಕೆಯನ್ನು ಕೊಂಡಾಡಿದರು. ಜಿ.ಪಂ ಸದಸ್ಯ ಅರೇಕೊಡಿಗೆ ಶಿವು, ತಾ.ಪಂ. ಅಧ್ಯಕ್ಷ ಹಿತ್ಲುಮಕ್ಕಿ ರಾಜೇಂದ್ರ, ಸದಸ್ಯಶೇಷಗಿರಿ, ಕಾಂಗ್ರೆಸ್ ಮುಖಂಡ ರಾದ ರಾಮದಾಸ್, ಧರಣೇಂದ್ರ, ಜೆಡಿಎಸ್ನ ಆಶಾಲತಾ ಜೈನ್ ಮತ್ತಿತರರು ಭಾಗವಹಿಸಿದ್ದರು. ಜಿ.ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮೀಣಾಭಿವೃದ್ಧಿ ಯೋಜನೆ ಯಲ್ಲಿ ಶಾಲೆಗಳಿಗೆ ತಟ್ಟೆ ಲೋಟ ವಿತರಿಸಲಾಯಿತು. ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ಕೃಷಿಕರಿಗೆ ತೆಂಗಿನ ಸಸಿಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.