ಕಳಸ: ಮಳೆಯ ಕೊರತೆಯು ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಗೆ ಕಾರಣವಾಗಲಿದೆ ಎಂಬ ಆತಂಕದ ಹಿಂದೆಯೇ ಈ ವರ್ಷದ ಭತ್ತದ ಫಸಲಿನ ಮೇಲೂ ಪರಿಣಾಮ ಬೀರುವುದು ಖಚಿತವಾಗಿದೆ.
ಹೋಬಳಿಯ ಮಕ್ಕಿ ಗದ್ದೆಗಳಲ್ಲಿ ಈಗಾಗಲೇ ನೀರಿನ ಕೊರತೆ ಕಂಡು ಬಂದಿದ್ದು ಅನ್ನದಾತರು ಕಂಗಾಲಾಗಿದ್ದಾರೆ. ಈ ವರ್ಷದ ಮಳೆಗೆ ಭತ್ತದ ಫಸಲಿನ ಆಸೆ ಇಟ್ಟುಕೊಳ್ಳುವಂತೆಯೇ ಇಲ್ಲ. ಈಗಾಗ್ಲೇ ಗದ್ದೆಗೆ ನೀರಿಲ್ಲದೆ ಒಸರಿನ ಜಾಗದಿಂದ ಚರಂಡಿ ಹೊಡ್ಕಂಡು ನೀರು ತರ್ತಾ ಇದ್ದೀವಿ’ ಎಂದು ಎಡದಾಳಿನ ಭತ್ತದ ಕೃಷಿಕ ಬೋವಿಪಾಲು ನಾಗೇಶ್ ಹೇಳುತ್ತಾರೆ.
ಭತ್ತದ ಕೃಷಿಯು ಆಕರ್ಷಣೆ ಕಳೆದು ಕೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಬಹಳಷ್ಟು ರೈತರು ಭತ್ತದ ಕೃಷಿಯನ್ನೇ ಕೈಬಿಟ್ಟಿದ್ದಾರೆ. ಬಹಳಷ್ಟು ಶ್ರಮ ವಹಿಸಿ ಭತ್ತದ ಕೃಷಿ ಮಾಡಿರುವ ರೈತರಿಗೆ ಮಳೆ ಕೊರತೆ ಭ್ರಮನಿರಸನ ಮಾಡಿದೆ.
ಸಾಮಾನ್ಯವಾಗಿ ಅಕ್ಟೋಬರ್ ವರೆಗೂ ನಿಯಮಿತವಾಗಿ ಬೀಳುತ್ತಿದ್ದ ಮಳೆ ಈ ವರ್ಷ ಭತ್ತದ ಗದ್ದೆಗೆ ಸಾಕಾಗುವಷ್ಟು ನೀರು ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಭತ್ತದ ಗದ್ದೆಯ ಸಾಗುವಳಿ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಕಡಿಮೆ ಆಗಲು ಈ ಬಾರಿಯ ಮಳೆ ಕೊರತೆ ಕಾರಣ ಆಗಲಿದೆ.
ಮಳೆಯನ್ನು ನಂಬಿಕೊಂಡರೆ ನಮ್ ಗದ್ದೆ ಸುಟ್ಟುಕೊಳ್ಳಬೇಕಾಗುತ್ತೆ. ಈ ವಾರ ರೈತರೆಲ್ಲರೂ ಸೇರಿ ನೀರಿನ ಕಾಲುವೆ ರಿಪೇರಿ ಮಾಡಬೇಕಾಗಿದೆ
- ಮಂಜಪ್ಪ ಪೂಜಾರಿ
ಕೃಷಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.