ADVERTISEMENT

ಕುಡಿಯುವ ನೀರಿಗೆ ಹಾಹಾಕಾರ !

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 8:15 IST
Last Updated 23 ಜನವರಿ 2012, 8:15 IST

ಕಡೂರು: ತಾಲ್ಲೂಕಿನಲ್ಲೇ ಅತಿ ಹಿಂದುಳಿದ ಮತ್ತು ಗುಡ್ಡಗಾಡಿನ ಪ್ರದೇಶ ಎಮ್ಮೆದೊಡ್ಡಿ ಮುಸ್ಲಾಪುರದಹಟ್ಟಿ ಗ್ರಾಮಕ್ಕೆ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.  

ಇದರಿಂದ ದೂರದ ಕೊಳವೆ ಬಾವಿಗಳಿಂದ ನೀರು ತರುತ್ತಿರುವ ದೃಶ್ಯ ಸಾಮಾನ್ಯ ಎಂದು ಗ್ರಾಮಸ್ಥ ಪರವಾಗಿ ರಮೇಶ್ ಹೇಳಿದರು.  ಗ್ರಾಮದ ಕೂಗಳತೆಯ ದೂರದಲ್ಲಿ ಇತಿಹಾಸ ಪ್ರಸಿದ್ಧ ಮದಗದಕೆರೆ ಇದ್ದರೂ  ಕಾಲುವೆಯಿಂದ ನೀರನ್ನು ಹರಿಸದೆ ನಿಲ್ಲಿಸಿರುವುದರಿಂದ ಜಾನುವಾರುಗಳಿಗೂ ನೀರಿಗೆ ತೊಂದರೆಯಾಗಿದೆ.

ಊರಿನಲ್ಲಿ ಬೃಹತ್ ನೀರಿನ ಟ್ಯಾಂಕ್ ಇದ್ದರು ಇಲ್ಲಿನ ನೀರುಘಂಟಿ (ವಾಟರ್ ಮನ್) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹನುಮಯ್ಯ ಅವರ ನಿರ್ಲಕ್ಷ್ಯದಿಂದ ನೀರು ಪೂರೈಕೆಯಾಗುತ್ತಿಲ್ಲ. ಕಾರ್ಯದರ್ಶಿ ಭದ್ರಾವತಿಯಲ್ಲಿ ವಾಸವಾಗಿದ್ದು ಕರ್ತವ್ಯಕ್ಕೆ ಬರುವುದೇ ಕಡಿಮೆ. ಬಂದರೂ ಕಚೇರಿಯಲ್ಲಿ ಕೆಲವು ಗಂಟೆಗಳು ಮಾತ್ರ ಇದ್ದು ಕಚೇರಿ ಕೆಲಸಕ್ಕೆಂದು ತೆರಳುವ ಪರಿ ಪಾಠ ಬೆಳೆಸಿಕೊಂಡಿದ್ದಾರೆ. ಗ್ರಾಮಸ್ಥರ ಪರಿಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ.
ಶೀಘ್ರವೇ ಕುಡಿಯುವ ನೀರಿನ ಪರಿಸ್ಥಿತಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ಬಗೆ ಹರಿಸದಿದ್ದರೆ, ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಸುತ್ತಮುತ್ತಲಿನ ಗ್ರಾಮಸ್ಥರು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಕಳೆದ ವಾರವಷ್ಟೆ ಮುಗಿದ ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅನೇಕ ಪಕ್ಷಗಳ ಮುಖಂಡರು ಬಂದಾಗ ಇಲ್ಲಿನ ಪರಿಸ್ಥಿತಿಯನ್ನು ಅವರ ಗಮನಕ್ಕೆ ತಂದಿದ್ದೆವು. ಚುನಾವಣೆ ಮುಗಿಯಿತು. ಆನಂತರ ಸಮಸ್ಯೆಯನ್ನು ಅವರು ಸಹ ಮರೆತಿದ್ದಾರೆ.  ಇನ್ನು ಮುಂದಾದರು ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಅವರು  ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.