ADVERTISEMENT

ಕೃಷಿಗೆ ರೂ 371 ಕೋಟಿ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 10:15 IST
Last Updated 2 ಮಾರ್ಚ್ 2011, 10:15 IST

ತರೀಕೆರೆ: ಪ್ರಸ್ತುತ ಆರ್ಥಿಕ ವರ್ಷದಲ್ಲಿ ರೂ.1112 ಕೋಟಿ ಕೃಷಿ ಮತ್ತು ಕೃಷಿಯೇತರ ಸಾಲ ನೀಡಲು ನಿರ್ಧರಿಸಲಾಗಿದ್ದು, ಇದುವರೆಗೂ 545 ಕೋಟಿ ಹಣವನ್ನು ಸಾಲದ ರೂಪದಲ್ಲಿ ವಿತರಿಸಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಲಕರ್ಣಿ ತಿಳಿಸಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಬ್ಯಾಂಕ್ ವ್ಯವಸ್ಥಾಪಕರ ಸಭೆ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಸಬ್ಸಿಡಿ ಸಾಲ ಸೌಲಭ್ಯವನ್ನು ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಸ್ಪಂದಿಸಿ ಅರ್ಹರಿಗೆ ವಿತರಿಸಲು ಮುಂದಾಗಿದೆ ಎಂದರು.

ಕೃಷಿರಂಗಕ್ಕಾಗಿ ಮೀಸಲಿಟಿದ್ದ ರೂ 746 ಕೋಟಿ ಹಣದಲ್ಲಿ 2010 ಡಿಸೆಂಬರ್ ಅಂತ್ಯದ ವೇಳೆಗೆ ಒಟ್ಟು ರೂ 371 ಕೋಟಿ ಸಾಲ ವಿತರಿಸಲಾಗಿದೆ. ಗೃಹ ನಿಮಾಣ, ವಾಹನ ಮತ್ತು ಶಿಕ್ಷಣ ಹಾಗೂ ಕೃಷಿಯೇತರ ಸಾಲ ನೀಡಲು ನಿಗದಿಯಾಗಿದ್ದ ರೂ. 365 ಕೋಟಿ ಹಣದಲ್ಲಿ ರೂ.174 ಕೋಟಿ ಹಣವನ್ನು ನೀಡಲಾಗಿದ್ದು ಒಟ್ಟಾರೆ ಶೇ 50ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾಫಿ ಬೆಳೆಗೆ ವಿಶೇಷ ಪ್ಯಾಕೇಜ್ ಪ್ರಕಟಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮರು ಪಾವತಿಯಾಗುತ್ತಿದೆ. ಕಾಫಿ ಬೆಳೆಗಾರರಿಗೆ ಶೇ 66 ರಷ್ಟು ಸಾಲ ಸೌಲಭ್ಯ ನೀಡಲಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ತೃಪ್ತಿಕರವಾಗಿ ಕರ್ತವ್ಯ ನಿರ್ವಹಿಸುತ್ತಿವೆ ಎಂದರು.ರಿಸರ್ವ್ ಬಾಂಕ್‌ನ ಬೆಂಗಳೂರಿನ ವ್ಯವಸ್ಥಾಪಕ ಪ್ರತಿನಿಧಿ ಕಲ್ಪನಾ, ನಬಾರ್ಡ್ ಎಜಿಎಂ ದಿವಾಕರ್ ಹೆಗಡೆ, ಚಿಕೊ ಬ್ಯಾಂಕ್ ವ್ಯವಸ್ಥಾಪಕ ರಾಮಪ್ಪ ಮತ್ತು ತಾಲ್ಲೂಕಿನ ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕರು ಸಭೆಯಲ್ಲಿ ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.