ADVERTISEMENT

ಗ್ರಾಮಾಭಿವೃದ್ಧಿ: 20ಕೋಟಿ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 6:40 IST
Last Updated 28 ಫೆಬ್ರುವರಿ 2011, 6:40 IST

ವರ್ಕಾಟೆ (ಎನ್.ಆರ್.ಪುರ): ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 50 ಜ್ಞಾನ ವಿಕಾಸ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಂ.ಶೀನಪ್ಪ ತಿಳಿಸಿದರು.ತಾಲ್ಲೂಕಿನ ವರ್ಕಾಟೆ ಗ್ರಾಮದಲ್ಲಿ ಗುರುವಾರ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನೇ ಕೂಡಿಗೆ, ವರ್ಕಾಟೆ, ಸಾರ್ಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಯೋಜನೆ ಕ್ಷೇತ್ರದ ಮೂರು ತಾಲ್ಲೂಕುಗಳಲ್ಲಿ 19ಸಾವಿರ ಕುಟುಂಬಗಳಲ್ಲಿ, 26ಸಾವಿರ ಸದಸ್ಯರು ಹಾಗೂ 2,700 ಸ್ವಸಹಾಯ ಸಂಘಗಳನ್ನ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 20ಕೋಟಿ ವೆಚ್ಚದ ವಾರ್ಷಿಕ ಯೋಜನೆ ರೂಪಿಸಲಾಗಿದೆ. ಪ್ರಗತಿಬಂಧು ಸ್ವಸಹಾಯ ಸಂಘಗಳಿಗೆ 20ಕೋಟಿ, ಕೃಷಿ ಮತ್ತು ಇತರೆ ಉದ್ದೇಶಗಳಿಗೆ ಒಟ್ಟು 45 ಕೋಟಿ ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ ಹಾಲಿನ ಡೇರಿ ಇಲ್ಲದಿರುವುದರಿಂದ ಇದರ ಸ್ಥಾಪನೆಗೆ  ತೀವ್ರ ಹೋರಾಟ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಹಾಯಕ ಸರ್ಕಾರಿ ವಕೀಲರಾದ ಕೆ.ಜಿ.ಕಲ್ಪನಾ ಮಾತನಾಡಿ, ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಯೋಜನೆ ವತಿಯಿಂದ ನೆರವೇರುತ್ತಿದೆ. ಎಲ್ಲರಲ್ಲೂ ಮಾನವೀಯ ಮೌಲ್ಯಗಳನ್ನು ಬೆಳಿಸಿ ಮಾನವ ಧರ್ಮವನ್ನು ಬೆಳಸಲು ಸಂಸ್ಥೆಗಳು ಪ್ರಯತ್ನಿಸ ಬೇಕು. ಯಾವುದೇ ಸಂಘಟನೆಗ ಜನಸಾಮಾ ನ್ಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಯತ್ನಿಸಬೇಕು. ಮಹಿಳೆ ಯರು ಎಲ್ಲಾ ರಂಗವನ್ನು ಪ್ರವೇಶಿಸುತ್ತಿದ್ದು ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಬೇಕು ಎಂದರು.

ಅಧ್ಯಕ್ಷತೆಯನ್ನು ಸಾರ್ಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಟಿ.ರಘು ವಹಿಸಿದ್ದರು. ವರ್ಕಾಟೆ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ವಿ.ಆರ್. ತಿಮ್ಮೇಗೌಡ, ಶ್ರೀಮಾಸ್ತಾಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಕೆ.ಕೃಷ್ಣಮೂರ್ತಿ, ಎನ್. ಎಂ. ಕಾಂತರಾಜ್ ವಿವಿಧ ಒಕ್ಕೂಟಗಳ ನೂತನ ಪದಾಧಿಕಾರಿಗಳು ಇದ್ದರು. ಅಶ್ವಿನಿ ಮತ್ತು ತಂಡ, ರಮೇಶ್, ಹೇಮಲತಾ, ಸದಾ ನಂದ, ಶ್ರೀಕಾಂತ  ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.