ADVERTISEMENT

`ಜನಸಂಖ್ಯೆ ನಿಯಂತ್ರಣಕ್ಕೆ ಅರಿವು ಅಗತ್ಯ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 11:08 IST
Last Updated 16 ಜುಲೈ 2013, 11:08 IST

ನರಸಿಂಹರಾಜಪುರ: ವಿದ್ಯಾರ್ಥಿಗಳಲ್ಲಿ ಕಾಲೇಜು ಹಂತದಲ್ಲಿಯೇ ಜನಸಂಖ್ಯೆ ಏರಿಕೆಯಿಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವುದರಿಂದ ಜನಸಂಖ್ಯಾ ಏರಿಕೆಯಲ್ಲಿಯಲ್ಲಿ ಸ್ಥಿರತೆ ಸಾಧಿಸಲು ಸಾಧ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಲಿತ ತಿಳಿಸಿದರು.

ತಾಲ್ಲೂಕಿನ ಮೆಣಸೂರು ಗ್ರಾಮದಲ್ಲಿರುವ ಮೌಂಟ್‌ಕಾರ್ಮಲ್ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷ ಭಾರತದಲ್ಲಿ 8.40ಲಕ್ಷ ಜನಸಂಖ್ಯೆ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಅತಿ ಕಡಿಮೆ ವಯಸ್ಸಿನಲ್ಲಿ ವಿವಾಹವಾಗುವುದರಿಂದ ಸಂತಾನೋತ್ಪತ್ತಿಯ ಅವಧಿ ಹೆಚ್ಚಾಗಿ ಕುಟುಂಬದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ ವಿವಾಹದ ವಯಸ್ಸನ್ನು ಸಾಧ್ಯವಾದಷ್ಟು ಮುಂದೂಡುವುದರಿಂದ ಕುಟುಂಬ ನಿಯಂತ್ರಣ ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತರಾಗಬೇಕು. ಇದರಿಂದ ಜನಸಂಖ್ಯಾ ನಿಯಂತ್ರಣಕ್ಕೆ ಕೊಡುಗೆ ನೀಡಿದಂತಾಗಿ ಆರೋಗ್ಯ, ಶಿಕ್ಷಣ, ವಸತಿ ಮುಂತಾದ ಸಮಸ್ಯೆಗಳಿಂದ ಮುಕ್ತಿಪಡೆಯಬಹುದು. ಹದಿಹರೆಯದವರ ಆರೋಗ್ಯ ಸಮಸ್ಯೆಯ ಬಗ್ಗೆ ಅರಿವು ಮೂಡಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸ್ನೇಹ ಕ್ಲಿನಿಕ್ ಪ್ರಾರಂಭಿಸಲಾಗಿದ್ದು ಪ್ರಯೋಜನ ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾ ಮಾತನಾಡಿ ಆಗಸ್ಟ್ 1ರಿಂದ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಎಲ್ಲಾ ಮಕ್ಕಳಿಗೂ ಉಚಿತ ತಪಾಸಣೆ ಮಾಡಲಾಗುತ್ತದೆ. ಇದರಲ್ಲಿ ಯಾವುದಾದೂ ಮಕ್ಕಳಿಗೆ ನ್ಯೂನತೆಗಳು ಕಂಡು ಬಂದರೆ ರೂ.2 ಲಕ್ಷದವರೆಗಿನ ಚಿಕಿತ್ಸೆಯನ್ನು ಸರ್ಕಾರ ನೀಡಲಿದೆ. ಎಲ್ಲಾ ವಿದ್ಯಾರ್ಥಿಗಳು ತಪಾಸಣೆ ಮಾಡಿಕೊಳ್ಳಬೇಕು ಎಂದರು.

ಪ್ರಾಂಶುಪಾಲೆ ಸಿಸ್ಟರ್ ರೊಸಿನಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನಾಂಗಕ್ಕೆ ಸಣ್ಣಕುಟುಂಬಗಳನ್ನು ಹೊಂದುವುದರಿಂದ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮ ಉಪ ಯುಕ್ತಎಂದು ಹೇಳಿದರು.

ವಿದ್ಯಾರ್ಥಿಗಳಾದ ನವ್ಯಶ್ರೀ, ಸೌಮ್ಯ, ನಂದಿನಿ, ಛಾಯಾಮಣಿ ಇದ್ದರು. ವಿದ್ಯಾರ್ಥಿಗಳು ಸಣ್ಣ ಕುಟುಂಬಗಳಿಂದಾಗುವ ಉಪಯೋಗ ಮತ್ತು ದೊಡ್ಡ ಕುಟುಂಬಗಳಿಂದಾಗುವ ಅನಾನುಕೂಲಗಳ ಬಗ್ಗೆ ಕಿರುನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT