ADVERTISEMENT

`ಪಕ್ಷನಿಷ್ಠೆ, ಪರಿಶ್ರಮ ಇದ್ದರೆ ಗೆಲುವು'

ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 7:03 IST
Last Updated 13 ಏಪ್ರಿಲ್ 2013, 7:03 IST

ಚಿಕ್ಕಮಗಳೂರು: `ಜಾತಿ ರಾಜಕೀಯದ ಮೇಲೆ ನಂಬಿಕೆ ಇಲ್ಲ. ಜಾತಿ ಅಸ್ತ್ರವಾ ಗಿಟ್ಟುಕೊಂಡು ಅಭಿವೃದ್ಧಿ ಕೈಗೊಂಡಿಲ್ಲ. ಎಲ್ಲ ಸಮುದಾಯವನ್ನು ಸಮಾನವಾಗಿ ಕಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ, ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಪ್ರೀತಿ ಮತ್ತು ಅಭಿವೃದ್ಧಿಯ ರಾಜಕಾರಣಕ್ಕೆ ಬೆಲೆ ನೀಡಿ ಸ್ವಇಚ್ಛೆಯಿಂದ ಕುರುಬ ಜನಾಂಗ ಸಹಕಾರ ನೀಡಿದೆ. ಇದರಿಂದ ನೂರಾನೆ ಬಲ ಬಂದಂತಾಗಿದೆ' ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯ ದಲ್ಲಿ ಶುಕ್ರವಾರ ನಡೆದ ಬಿಜೆಪಿ ಬೆಂಬಲಿತ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತ ನಾಡಿದರು.
ಗ್ರಾಮ ಪಂಚಾಯಿತಿ, ನಗರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಪಿಎಂಸಿ ಸೇರಿದಂತೆ ಯಾವುದೇ ಹಂತದಲ್ಲೂ ರಾಜಕೀಯ ತಾರತಮ್ಯ ಮಾಡಿಲ್ಲ. ಪಕ್ಷ ನಿಷ್ಠೆ, ಪರಿಶ್ರಮ ಇದ್ದರೆ ಯೋಗ್ಯತೆ ಆಧಾರದಲ್ಲಿ ಮೇಲೆ ಬರಲು ಸಾಧ್ಯ. ಇದಕ್ಕೆ ನಮ್ಮ ಪಕ್ಷ ಯಾವಾಗಲೂ ನೀಡುತ್ತದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಹಿಂದೆ ಕುರುಬ ಸಮಾಜ ಇದೆ ಎಂದು ದಿಕ್ಕು ತಪ್ಪಿಸುತ್ತಾರೆ. ಸಮಾಜ ಗುರುತಿಸಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುವ ಏಕೈಕ ಪಕ್ಷ ಬಿಜೆಪಿ ಎನಿಸಿಕೊಂಡಿದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ಎಸ್.ಪುಟ್ಟೇಗೌ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ನಗರ ಅಧ್ಯಕ್ಷ ಸಿ.ಎಸ್.ರಂಗನಾಥ್, ಎಪಿಎಂಸಿ ಅಧ್ಯಕ್ಷ ಬೆಳವಾಡಿ ರವೀಂದ್ರ, ಸದಸ್ಯ ನಿಂಗೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಕನಕರಾಜ್, ಮುಖಂಡರಾದ ನಿಂಗೇಗೌಡ, ನಿಡಗಟ್ಟ ಲೋಕೇಶ್, ನಾಗರಾಜ್, ಕಾಮನಕೆರೆ ಶಶಿಧರ್, ದೊಡ್ಡಪ್ಪಗೌಡ ಇತರರು ಇದ್ದರು.

ಆದಿಶಕ್ತಿ ನಗರದಲ್ಲಿ ಪ್ರಚಾರ: ನಗರದ ಹೊರವಲದ ಶಕ್ತಿ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಅನುದಾನದ ನಾಮಫಲಕಗಳನ್ನು ಆಯಾ ಪ್ರದೇಶದಲ್ಲಿ ಹಾಕಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಒತ್ತಾಯಿಸಿದ್ದವು. ಈಗ ಆ ಫಲಕಗಳನ್ನು ಮುಚ್ಚುವಂತೆ ಈ ಎರಡೂ ಪಕ್ಷಗಳು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿವೆ ಎಂದು ಗೇಲಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕನಕರಾಜ್, ಪಕ್ಷದ ನಗರ ಘಟಕ ಅಧ್ಯಕ್ಷ ಸಿ.ಎಸ್.ರಂಗನಾಥ್, ಗ್ರಾ.ಪಂ. ಅಧ್ಯಕ್ಷ ದಿನೇಶ್, ನಗರಸಭೆ ಸದಸ್ಯ ಶ್ರೀನಿವಾಸ್ ಮುಖಂಡರಾದ, ಮಧು ಕುಮಾರ್ ರಾಜ್ ಅರಸ್, ವರಸಿದ್ದಿ ವೇಣುಗೋಪಾಲ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.