ಚಿಕ್ಕಮಗಳೂರು: ಬಾಲಸುಬ್ರಹ್ಮಣ್ಯನ್ ಆಯೋಗವನ್ನೇ ರದ್ದುಪಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಎಚ್.ದೇವರಾಜ್ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿಗೆ ಸಂಬಂಧಿಸಿದಂತೆ ಬಾಲಸುಬ್ರಹ್ಮಣ್ಯಂ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕೆಂದು ಮನವಿ ಮಾಡಿದರು.
15 ದಿನದೊಳಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಿಯೋಗ ತೆರಳಿ ಸರ್ಕಾರಕ್ಕೆ ಒತ್ತುವರಿ ಸಾಧಕ, ಬಾಧಕಗಳನ್ನು ತಿಳಿಸಲಾಗುವುದು ಎಂದರು.
ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡರೆ ಜಿಲ್ಲೆಯಲ್ಲಿ 150 ಗ್ರಾಮಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಸರ್ಕಾರ ಕೆಲವು ಪ್ರದೇಶದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿದೆ. ಈಗ ಭೂಮಿ ಅರಣ್ಯ ಇಲಾಖೆಗೆ ಸೇರಿದೆಯೆಂದು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಜೀವನ ನಿರ್ವಹಣೆಗಾಗಿ ದಲಿತರು, ಕೂಲಿಕಾರ್ಮಿಕರು, ಬಡವರು ಒತ್ತುವರಿ ಮಾಡಿದ್ದಾರೆ. ಇಂತಹವರ ಒತ್ತುವರಿಗೆ ನಿಗದಿತ ದಂಡ ಶುಲ್ಕ ವಿಧಿಸಿ, ಸಾಗುವಳಿ ಚೀಟಿ ನೀಡಬೇಕು ಎಂದರು.
ಬಡವರು ಮಾಡಿರುವ ಒತ್ತುವರಿಯನ್ನು ಸಕ್ರಮಗೊಳಿಸಲು ಹೊಸ ಕಾಯ್ದೆಯನ್ನು ಜಾರಿಗೆ ತರಬೇಕಾಗಿದೆ. ಸಂಘರ್ಷದಿಂದ ಒತ್ತುವರಿ ತೆರವುಗೊಳಿಸಲಾಗದೆಂಬ ಕಟು ಸತ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮನಗಾಣಬೇಕು ಎಂದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಹಿಡಿದ ಮೇಲೆ ತರಾತುರಿಯಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸುವ ಮೂಲಕ ರೈತರ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದ್ದಾರೆಂದು ಆರೋಪಿಸಿದರು.
ಗುಟ್ಕಾ ನಿಷೇಧ ಮಾಡುವ ಮೊದಲು ರೈತರ ಉಳಿವಿಗೆ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಯೋಚಿಸಬೇಕು. ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಅವರ ಬದುಕಿಗೆ ನೆರವು ದೊರಕಿಸಿಕೊಡಬೇಕು. ಗುಟ್ಕಾ ನಿಷೇಧಿಸಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮದ್ಯಪಾನ ಮತ್ತು ಎಲ್ಲ ರೀತಿಯ ಮಾದಕ ವಸ್ತುಗಳ ಮಾರಾಟ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಜಿ.ಎಸ್.ಚಂದ್ರಪ್ಪ, ಎಂ.ಡಿ.ರಮೇಶ್,ಹೊಲದಗದ್ದೆ ಗಿರೀಶ್, ದೇವಿ ಪ್ರಸಾದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.