ಅಜ್ಜಂಪುರ:ಇಲ್ಲಿನ ಬಸ್ ನಿಲ್ದಾಣ ಸಮೀಪ ಇರುವ ರಾಘವೇಂದ್ರ ಬೇಕರಿ ಬುಧವಾರ ಬೆಳಿಗ್ಗೆ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ನಷ್ಟವಾಗಿದೆ.
ವಿದ್ಯುತ್ ಶಾರ್ಟ್ ಸರ್ಕಿಟ್ ಹಾಗೂ ಗ್ಯಾಸ್ ಸೋರಿಕೆಯಿಂದ ಇಡೀ ಬೇಕರಿ ಸಂಪೂರ್ಣವಾಗಿ ಭಸ್ಮವಾಗಿದ್ದು, ಸುಮಾರು 5ಲಕ್ಷರೂ ಮೌಲ್ಯದ ವಸ್ತು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಎಂದಿನಂತೆ ಬೇಕರಿ ತೆರೆದು ದಿನನಿತ್ಯದ ಕೆಲಸದಲ್ಲಿ ತೊಡಗಲು ಮುಂದಾದಾಗ ವಿದ್ಯುತ್ ಚಾಲಿತ ಯಂತ್ರಗಳ ಸ್ವಿಚ್ ಹಾಕಿದಾಗ ತಕ್ಷಣವೇ ಬೆಂಕಿಹೊತ್ತಿಕೊಂಡಿತು. ಇದೇ ವೇಳೆ ಅಕ್ಕಪಕ್ಕದಲ್ಲಿ ಗೋಣಿಚೀಲ, ಎಣ್ಣೆ, ಗ್ಯಾಸ್ ಸಿಲಿಂಡರ್ಗೂ ಸಹ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಬೇಕರಿ ಮಾಲೀಕರು ಸಿಲಿಂಡರ್ ಸಂಪರ್ಕ ಕಡಿತಗೊಳಿ ಸಿದರೂ ಸಾಕಷ್ಟು ವಸ್ತುಗಳು ಬೆಂಕಿಯಿಂದ ಸುಟ್ಟು ಹೋದವು.
ಬೇಕರಿ ಪಕ್ಕದಲ್ಲಿರುವ ಮಂಜುನಾಥ್ ಕ್ಲಾತ್ ಸೆಂಟರ್ ಮತ್ತು ಗುರುರಾಜ್ ಟೆಕ್ಸ್ಟೈಲ್ಸ್ ಗಳಿಗೂ ಬೆಂಕಿ ಅವರಿಸುವ ಮುನ್ಸೂಚನೆ ಕಂಡು ಬಂದಿದ್ದರಿದ ಅಲ್ಲಿ ನೆರೆದಿದ್ದ ಸಾರ್ವಜನಿಕರು ಅಂಗಡಿಯ ಎಲ್ಲ ಬಟ್ಟೆಯನ್ನು ಕ್ಷರ್ಣಾರ್ಧದಲ್ಲಿ ಸ್ಥಳಾಂತರಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ಕಾಂತರೆಡ್ಡಿ, ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಜತೆಗೂಡಿ ವಸ್ತು ಸಾಗಿಸಲು ನೆರವಾದರು.
ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವ ಮೊದಲು ಇಲ್ಲಿನ ಮಲ್ಲಿಕಾರ್ಜನ ನೀರು ಪೂರೈಕೆ ಮಾಲೀಕರು ಟ್ಯಾಂಕ್ ನೀರು ತಂದು ಬೆಂಕಿ ನಂದಿಸಲು ನೆರವಾದರು. ಆನಂತರ ಕಡೂರು ಹಾಗೂ ತರೀಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸಂಪೂರ್ಣವಾಗಿ ಬೆಂಕಿ ನಂದಿಸಿದರೂ ಬೇಕರಿಯ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಬೇಕರಿ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಶಾಸಕರ ಮುಖಾಂತರ ಶಿಫಾರಸು ಮಾಡಲಾಗುವುದೆಂದು ತಿಳಿಸಿದರು. ರವಿನ್ಯೂ ಇನ್ಸ್ಪೆಕ್ಟರ್ ನುಂಜುಡಪ್ಪ ಭೇಟಿ ನೀಡಿ ಘಟನೆ ಬಗ್ಗೆ ತರೀಕೆರೆ ತಹಶೀಲ್ದಾರ್ ಹಾಗೂ ಉಪದಂಡಾಧಿಕಾರಿ ಅವರಿಗೆ ಸಮಗ್ರ ವರದಿ ನೀಡಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.