ADVERTISEMENT

ಮಕ್ಕಳ ಗ್ರಾಮ ಸಭೆ: ದೂರುಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 9:45 IST
Last Updated 20 ಡಿಸೆಂಬರ್ 2012, 9:45 IST

ಮೂಡಿಗೆರೆ: ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ, ಗ್ರಾ.ಪಂ. ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಂದ ದೂರುಗಳ ಮಹಾಪೂರವೇ ಹರಿದುಬಂತು.

ಶಾಲೆಗೆ ಶೌಚಾಲಯ ಒದಗಿಸಿ, ಶಾಲೆಯ ಬಾಗಿಲು ದುರಸ್ತಿಗೊಳಿಸಿ, ಶಾಲೆಗೆ ಆಟದ ಮೈದಾನ ಕಲ್ಪಿಸಿ, ಕುಸಿಯುವ ಹಂತದಲ್ಲಿರುವ ಮೇಲ್ಛಾವಣಿಯಿಂದ ರಕ್ಷಿಸಿ.... ಹೀಗೆ ಸರ್ಕಾರಿ ಶಾಲೆಗಳಲ್ಲಿರುವ ನಾನಾ ಸಮಸ್ಯೆಗಳನ್ನು ಶಾಲಾ ಮಕ್ಕಳು ಯಾವುದೇ ಅಂಜಿಕೆಯಿಲ್ಲದೇ ಜನಪ್ರತಿನಿಧಿಗಳ ಎದುರು ಹೇಳಿಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜಿ. ಪ್ರಭಾ ಮಹೇಶ್ ಅವರ ನೇತೃತ್ವದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಬಿದರಹಳ್ಳಿ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ಅಜಿತ್ ಮಾತನಾಡಿ, ಶಾಲೆಯ ಬಳಿ ವಾಹನದಟ್ಟನೆಯಿದ್ದು, ಸೂಕ್ತಕ್ರಮ ತೆಗೆದುಕೊಳ್ಳಬೇಕು. ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಮುಗ್ರಹಳ್ಳಿ ಶಾಲಾ ವಿದ್ಯಾರ್ಥಿ ದಿನೇಶ ಮಾತನಾಡಿ, ಶಾಲೆಯಲ್ಲಿ ಮೇಲ್ಛಾವಣಿ ಕುಸಿಯುವ ಹಂತದಲ್ಲಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ವಿವಿಧ ಅಂಗನವಾಡಿ ಕೇಂದ್ರಗಳಿಂದ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತರು ತಮ್ಮ ಕೇಂದ್ರಗಳಲ್ಲಿರುವ ಸಮಸ್ಯೆಗಳನ್ನು ಸಭೆಗೆ ತಿಳಿಸಿದರು.

ಮಕ್ಕಳ ದೂರುಗಳನ್ನು ಆಲಿಸಿದ ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಅನಂತ್ ತಮ್ಮ  ಅನುದಾನದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳ ಪಟ್ಟಿ ಮಾಡಿ ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ತಾ.ಪಂ. ಸದಸ್ಯೆ ಹೂವಮ್ಮ, ಗ್ರಾ.ಪಂ. ಅಧ್ಯಕ್ಷೆ ಬಿ.ಜಿ. ಪ್ರಭಾ ಮಹೇಶ್, ಉಪಾಧ್ಯಕ್ಷ ಮನೋಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ನ ಎಲ್ಲಾ ಸದಸ್ಯರು, ಪಿಡಿಒ ಜಗದೀಶ್, ಸಿಬ್ಬಂದಿ ಮಧುಕುಮಾರ್, ಪ್ರವೀಣ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.