ಮೂಡಿಗೆರೆ: ಪ್ರವಾಸಕ್ಕೆಂದು ಮಕ್ಕಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಒಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದ ಪರಿಣಾಮ, ಹದಿಮೂರಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ ಘಟನೆ ತಾಲ್ಲೂಕಿನ ಕೊಟ್ಟಿಗೆಹಾರದ ಚೆಕ್ಪೋಸ್ಟ್ ಸಮೀಪ ಭಾನುವಾರ ಮುಂಜಾನೆ ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಮ್ಮಾಯಿ ಗ್ರಾಮದ ‘ಮೊಹಿಲ್ಲಾ ಇಸ್ಲಾಂ ಮದರಸದ’ ವಿದ್ಯಾರ್ಥಿಗಳನ್ನು ಹಾಸನ ಜಿಲ್ಲೆಯ ಜಾವಗಲ್ ನಲ್ಲಿರುವ ದರ್ಗಾಕ್ಕೆ ಪ್ರವಾಸಕ್ಕೆಂದು ಕರೆದೊಯ್ಯುವ ವೇಳೆ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕೆಮ್ಮಾಯಿ ಗ್ರಾಮದ ಮಕ್ಕಳಾದ ಅಸ್ಮಾ (8), ಸಾಲಿಯಾ (9), ತಾಲೀಸ್ (10), ಅಪ್ನಾ (11), ರೂಫೇದಾ (13) ಇರ್ಷಾದ್ (12), ನಾಸೀರ್ (11), ಜಾಬೀರ್ (13), ಹನೀಸ್ (11), ಹಫ್ರೀಜ್ (8), ಹಾಗೂ ಚಾಲಕ ರಮ್ಲಾನ್ (39) ಎಂಬುವವರಿಗೆ ತೀವ್ರತರನಾದ ಗಾಯಗಳಾಗಿದ್ದು, ಪಟ್ಟಣದ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ.
ನೆರವಾದ ಆಟೊ ಚಾಲಕರು: ಘಟನೆ ಸಂಭವಿಸುತ್ತಿದ್ದಂತೆ ಕೊಟ್ಟಿಗೆಹಾರದ ಆಟೋ ಚಾಲಕರು ಸ್ಥಳಕ್ಕೆ ಆಗಮಸಿ, ಭದ್ರಗೊಂಡಿದ್ದ ವ್ಯಾನಿನ ಬಾಗಿಲನ್ನು ತೆರೆದು, ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ಸೇರಿಸುವ ಕಾರ್ಯವೆಸಗಿದ್ದಾರೆ. ಆಟೊದ ಮುಂದೆಯೇ ಸಾಗಿಬಂದ ವ್ಯಾನ್, ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಇದ್ದಕ್ಕಿದ್ದಂತೆ ಸಿನಿಮೀಯ ರೀತಿಯಲ್ಲಿ ಉರುಳಿ ಬಿತ್ತು. ತಕ್ಕಣ ಆಟೊ ನಿಲ್ಲಿಸಿ, ಕಂದಕಕ್ಕೆ ಇಳಿದಾಗ 30 ಕ್ಕೂ ಅಧಿಕ ಮಕ್ಕಳು ಹಾಗೂ ಮೂವರು ಶಿಕ್ಷಕರು ವ್ಯಾನಿನಲ್ಲಿ ಸಿಲುಕಿ ಗಾಯದಿಂದ ಕೂಗಾಡುತ್ತಿದ್ದರು. ಇದನ್ನು ಕಂಡ ತಕ್ಷಣವೇ ಆಟೊ ನಿಲ್ದಾಣಕ್ಕೆ ಫೋನಾಯಿಸಿ ಗಾಯಾಳುಗಳನ್ನು ಹೊರತೆಗೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.