ಆಲ್ದೂರು: ಕ್ಷೇತ್ರ ವ್ಯಾಪ್ತಿಯಲ್ಲಿ ವಸತಿ ಸಮಸ್ಯೆ ಹೆಚ್ಚಾಗಿದ್ದು, ಲಭ್ಯವಿದ್ದ ಮನೆಗಳನ್ನು ಎಲ್ಲಾ ಪಂಚಾಯಿತಿಗಳಿಗೂ ತಾರತಮ್ಯ ಮಾಡದೇ ಹಂಚಲಾಗಿದೆ. ವಸತಿ ಸಚಿವರು ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 3ಸಾವಿರ ಮನೆಗಳನ್ನು ನೀಡುವ ಭರವಸೆ ನೀಡಿದ್ದು, ಈ ಮೂಲಕ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವಲ್ಲಿ ಯತ್ನಿಸಲಾಗುವುದು ಎಂದು ಶಾಸಕ ಕುಮಾರ ಸ್ವಾಮಿ ಹೇಳಿದರು.
ಆಲ್ದೂರು ಗ್ರಾ.ಪಂ, ಚಿಕ್ಕಮಗಳೂರು ತಾ.ಪಂ, ಜಿ.ಪಂ ಹಾಗೂ ಶ್ರಮಸಂಸ್ಥೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಮತ್ತು ಪಂಚಾಯಿತಿ ಅಂಗಡಿ ಮಳಿಗೆ ಕಾಮಗಾರಿ ಶಂಕುಸ್ಥಾಪನೆ ಹಾಗೂ ಸುವರ್ಣಗ್ರಾಮ ಯೋಜನೆಯಡಿ ಗ್ರಾಮೀಣ ನಿರುದ್ಯೋಗಿಗಳಿಗೆ ವಿವಿಧ ವೃತ್ತಿ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಗೆ ಬಂದಿರುವ 40 ಕೋಟಿ ಅನುದಾನದಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ 18 ಕೋಟಿ ನೀಡಲಾಗಿದೆ. 3 ಕೋಟಿ ರೂಪಾಯಿ ವೆಚ್ಚದಲ್ಲಿ ಆಲ್ದೂರು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಜಿ.ಪಂ ಸದಸ್ಯೆ ಸವಿತಾ ರಮೇಶ್ ಮಾತನಾಡಿ, ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆ ಹಮ್ಮಿಕೊಂಡಿದೆ ಎಂದರು. ಗ್ರಾ.ಪಂ ಅಧ್ಯಕ್ಷ ಸಿ.ಎನ್.ಲಕ್ಷ್ಮಣ್ ಮಾತ ನಾಡಿ, ಗ್ರಾಮ ಪಂಚಾಯಿತಿಗಳು ಆದಾಯದ, ಅನುದಾನದ ಕೊರತೆಯಿಂದಾಗಿ ವಿದ್ಯುತ್ಬಿಲ್, ಸಿಬ್ಬಂದಿ ವೇತನಕ್ಕೂ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಎಚ್.ಎಸ್.ಕವೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ 125 ಆಶ್ರಯ ಮನೆ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಲಾಯಿತು. ಎಪಿಎಂಸಿ ಸದಸ್ಯ ನಾರಾಯ ಣಾಚಾರ್ಯ, ಗ್ರಾ.ಪಂ ಸದಸ್ಯರಾದ ಅಶೋಕ್,ಅಶ್ರಫ್, ಎಂ.ನಾಗೇಶ್, ಪುಟ್ಟಮ್ಮ, ನಾಗೇಶ್, ಸುಂದರ್, ಜಯಶೀಲಾ ಚಿದಂಬರ್, ಸತೀಶ್, ಸುಧಾ ಗಿರೀಶ್, ಶಾರದಾ, ಉಮೇಶ್, ಅಕ್ಬರ್ ಪಾಶ, ಪುಟ್ಟಯ್ಯ, ಪಿಡಿಒ ಗೋಪಾಲಗೌಡ, ಶ್ರಮಸಂಶ್ಥೆ ಶಾಮಾನಾಯಕ್, ಸುನೀತಾ ಬಾಯಿ, ಪ್ರಕಾಶ್, ಚಂದ್ರಪ್ಪ ಇದ್ದರು.
ರೈತರ ಆಸ್ತಿ ಹರಾಜು-ಖಂಡನೆ
ಚಿಕ್ಕಮಗಳೂರು: ಶೃಂಗೇರಿಯಲ್ಲಿ ಪಿಸಿಎಆರ್ಡಿ ಬ್ಯಾಂಕಿನ ಮಂಡಿ ಶಾಖೆ ಪ್ರಕಾಶ್ ಎಂಬವರ ಆಸ್ತಿ ಹರಾಜು ಪ್ರಕ್ರಿಯೆ ಆರಂಭಿಸಿದ ಕ್ರಮವನ್ನು ಯುವ ಕಾಂಗ್ರೆಸ್ ಜಿಲ್ಲಾ ಘಟಕ ಖಂಡಿಸಿದೆ.
ರೈತರ ಪರ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ರೈತರ, ಅಡಿಕೆ ಬೆಳೆಗಾರರ ಸಾಲ ವಸೂಲಿಗೆ ಆಸ್ತಿ ಮುಟ್ಟುಗೋಲಿಗೆ ತಡೆ ನೀಡಬೇಕೆಂದು ಕೋರಲಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಸಚಿನ್ ಮೀಗಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.