ADVERTISEMENT

‘ಸಂವಿಧಾನ ಬದಲಾಯಿಸುವ ಅಧಿಕಾರ ಯಾರಿಗೂ ಇಲ್ಲ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 9:07 IST
Last Updated 29 ಡಿಸೆಂಬರ್ 2017, 9:07 IST
ಚಿಕ್ಕಮಗಳೂರಿನಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರು ‘ನಾವೆಲ್ಲರೂ ಜಾತ್ಯತೀತರು ಇದೋ ನಾಡಿನ ಮಕ್ಕಳ ಘೋಷಣೆ....’ ಫಲಕವನ್ನು ಅನಾವರಣಗೊಳಿಸಿ ಸಮ್ಮಿಲನ– ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್‌ ಮೊಹಿಯುದ್ದೀನ್‌, ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌, ಕೇಂದ್ರ ಸಮಿತಿ ಸದಸ್ಯ ಹಸನಬ್ಬ, ಮಂಗಳೂರಿನ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್‌.ಉಮರ್‌, ಪ್ರೊ.ನಗರಗೆರೆ ರಮೇಶ್‌ ಇದ್ದರು.
ಚಿಕ್ಕಮಗಳೂರಿನಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರು ‘ನಾವೆಲ್ಲರೂ ಜಾತ್ಯತೀತರು ಇದೋ ನಾಡಿನ ಮಕ್ಕಳ ಘೋಷಣೆ....’ ಫಲಕವನ್ನು ಅನಾವರಣಗೊಳಿಸಿ ಸಮ್ಮಿಲನ– ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್‌ ಮೊಹಿಯುದ್ದೀನ್‌, ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌, ಕೇಂದ್ರ ಸಮಿತಿ ಸದಸ್ಯ ಹಸನಬ್ಬ, ಮಂಗಳೂರಿನ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಯು.ಎಚ್‌.ಉಮರ್‌, ಪ್ರೊ.ನಗರಗೆರೆ ರಮೇಶ್‌ ಇದ್ದರು.   

ಚಿಕ್ಕಮಗಳೂರು: ‘ಸಂವಿಧಾನ ಬದಲಾಯಿಸುತ್ತೇವೆ’ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ. ಅವರಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಸಂವಿಧಾನ ಬದಲಾವಣೆಗೆ ಯಾರಿಗೂ ಅಧಿಕಾರ ಇಲ್ಲ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಹೇಳಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ಸಂದ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ ‘ಸೌಹಾರ್ದ ಮಂಟಪ: ಹಿಂದಣ ನೋಟ... ಮುಂದಣ ಹೆಜ್ಜೆ...’ ರಾಷ್ಟ್ರೀಯ ಸಮಾವೇಶದಲ್ಲಿ ಸಮ್ಮಿಲನ– ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಿದ ಈ ಸಂವಿಧಾನದಲ್ಲಿ ದಲಿತರು, ಅಲ್ಪಸಂಖ್ಯಾತರು, ರೈತರು ಸಹಿತ ಎಲ್ಲ ಸಮುದಾಯದವರ ಸಹಬಾಳ್ವೆ, ಏಳಿಗೆಯ ಕನಸು ಇದೆ. ಸಂವಿಧಾನ ಬದಲಿಸಲು ಜನ ಯಾರಿಗೂ ಅಧಿಕಾರ ನೀಡಿಲ್ಲ’ ಎಂದು ಹೇಳಿದರು.

ADVERTISEMENT

‘ಗುಜರಾತ್‌ನಲ್ಲಿ ಹಿಂದುತ್ವದ ಹೆಸರಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ ದಬ್ಬಾಳಿಕೆ 22 ವರ್ಷಗಳಿಂದ ನಡೆದಿದೆ. ಈಗ ಅದಕ್ಕೆ ಕಡಿವಾಣ ಬೀಳುತ್ತಿದೆ. ಅಲ್ಲಿ ಹಿಂದುತ್ವ ಅಲೆ ಸಡಿಲಗೊಂಡಿದೆ. ಅಲ್ಲಿನ ಚುನಾವಣೆಯಲ್ಲಿ ಜಿಗ್ನೇಶ್ ಮೇವಾನಿ ಗೆಲುವು ಇದಕ್ಕೆ ಸಾಕ್ಷಿ’ ಎಂದರು.

‘ಚುನಾವಣೆ ಅಂಗವಾಗಿ ‘ಚಲೋ ಗುಜರಾತ್‌’ ಚಳವಳಿ ಕೈಗೊಂಡಿದ್ದೆವು. ಜಿಗ್ನೇಶ್‌ ಅದರ ಭಾಗವಾಗಿದ್ದರು. ಜಿಗ್ನೇಶ್ ಗೆಲುವು ವೈಯಕ್ತಿಕ ಅಲ್ಲ, ಅದು ಚಳವಳಿಗೆ ಸಂದ ಜಯ. ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿದೆ. ಗುಜರಾತ್‌ನ ಪ್ರಯೋಗ ಕರ್ನಾಟಕದ 25 ಕ್ಷೇತ್ರಗಳಲ್ಲಿ ನಡೆಯಬೇಕು’ ಎಂದು ಆಶಿಸಿದರು.

ದೇಶದಲ್ಲಿನ ಸುಮಾರು 200 ವಿದ್ಯಾರ್ಥಿ ನಾಯಕರ ಮೇಲೆ 5 ರಿಂದ 15 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂವಿಧಾನದ ಆಶಯ, ಮಾನವ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಈ ವಿದ್ಯಾರ್ಥಿ ನಾಯಕರ ಶಕ್ತಿಗುಂದಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ.

ವೇದಿಕೆಯು 15 ವರ್ಷಗಳಲ್ಲಿ ಕಠಿಣ ಹಾದಿ ಸವೆಸಿದೆ. ಗೌರಿ ಲಂಕೇಶ್‌ ಅವರ ಹೋರಾಟವನ್ನು ಜೀವಂತವಾಗಿಟ್ಟಿದೆ.ಸೌಹಾರ್ದ ಮಂಟಪದಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮದಲ್ಲೂ ಆಯೋಜಿಸಬೇಕು ಎಂದರು.

* * 

ಅಗಲಿದ ಸಂಗಾತಿಗಳ ಆಶಯ ಈಡೇರಿಸೋಣ. ಅವರ ಹೋರಾಟವನ್ನು ಮುಂದುವರಿಸುವ ಸಂಕಲ್ಪ ತೊಡೋಣ
ಸುರೇಶ್‌ ಭಟ್‌ ಬಾಕ್ರಬೈಲು
ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.