ADVERTISEMENT

ಹೆಚ್ಚಿದ ಮಳೆ: ಮಲೆನಾಡಿನಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 7:30 IST
Last Updated 16 ಸೆಪ್ಟೆಂಬರ್ 2011, 7:30 IST

ಕಳಸ: ಹೋಬಳಿಯಾದ್ಯಂತ ಗುರುವಾರ ಮಳೆಯ ಆರ್ಭಟ ಹೆಚ್ಚಿದ್ದು, ಕೃಷಿ ವಲಯದಲ್ಲಿ ಆತಂಕ ಹೆಚ್ಚಾಗಿದೆ.
ಕಳೆದ ನಾಲ್ಕು ದಿನಗಳಿಂದ ಸಂಜೆಯ ವೇಳೆಗೆ ಹನಿಹನಿ ಯಾಗಿ ಬರುತ್ತಿದ್ದ ಮಳೆ ಗುರುವಾರ ಬೆಳಿಗ್ಗೆ 11ರ ವೇಳೆಗೆ ರಭಸದಿಂದ ಸುರಿಯಲಾರಂಭಿಸಿತು. ಸಂಜೆ 4ಗಂಟೆಯವರೆಗೂ ಬಿದ್ದ ಮಳೆ ವಾತಾವರಣದಲ್ಲಿ ತಾಪಮಾನ ಕುಸಿಯಲು ಕಾರಣವಾಯಿತು.

ಮಳೆಯಿಂದಾಗಿ ಎಲ್ಲೆಡೆ ಚಳಿ ಗಾಳಿ ಬೀಸುತ್ತಿದ್ದು ಮಣ್ಣಿನಲ್ಲಿ ತೇವಾಂಶವೂ ಹೆಚ್ಚಿದೆ. ಸೆಪ್ಟೆಂಬರ್‌ನ ಈ ವೇಳೆಗೆ ಮಂಕಾಗಿರುತ್ತಿದ್ದ ಹಳ್ಳ, ತೊರೆ ನದಿಗಳು ಗುರುವಾರ ತುಂಬಿ ಹರಿಯುತ್ತಿದ್ದವು.ವಾಡಿಕೆಗಿಂತ ಹೆಚ್ಚು ಪ್ರಮಾಣದ ಮಳೆ ಸುರಿಯುತ್ತಿ ರುವುದರಿಂದ ಕಾಫಿ ಫಸಲಿಗೆ ಹಾನಿ ಆಗುವ ಭಯ ಬೆಳೆ ಗಾರರನ್ನು ಆವರಿಸಿದೆ. ಕೊಳೆ ರೋಗದಿಂದ ಫಸಲು ನೆಲಕ್ಕೆ ಉದುರುವ ಆತಂಕ ಅರೇಬಿಕಾ ಮತ್ತು ರೊಬಸ್ಟಾ ಬೆಳೆಗಾರರನ್ನು ಆವರಿಸಿದೆ.
ಅಡಿಕೆ ತೋಟಗಳಲ್ಲೂ ತೇವಾಂಶ ಹೆಚ್ಚಿದ್ದು ಕೊಳೆ ಬಾಧೆ ಕಂಡು ಬಂದಿದೆ. ಮಳೆ ಮುಂದುವರೆದಲ್ಲಿ ಮತ್ತಷ್ಟು ಹಾನಿ ಆಗುವ ನಿರೀಕ್ಷೆ ಇದೆ.

ಕಾಳುಮೆಣಸು ಫಸಲು ಮತ್ತು ಬಳ್ಳಿಗೂ ಮಳೆ ಬಾಧೆ ತರುವ ಸಾಧ್ಯತೆ ಇದೆ. ದಟ್ಟವಾಗಿ ಕವಿದಿರುವ ಮೋಡ ಮುಂದಿನ ಒಂದೆರಡು ದಿನವೂ ಮಳೆ ತರುವ ನಿರೀಕ್ಷೆ ಇದೆ.

ತುಂಗಾನದಿ ಮಟ್ಟ ಏರಿಕೆ
ಶೃಂಗೇರಿ : ತಾಲ್ಲೂಕಿನಾದ್ಯಂತ ಗುರುವಾರ ಧಾರಾಕಾರವಾಗಿ ಮಳೆ ಸುರಿದಿದೆ. ಕಳೆದ 2-3 ದಿನಗಳಿಂದ ಸ್ವಲ್ಪ ವಿರಾಮ ನೀಡಿದ ಮಳೆ ಒಂದೇ ಸಮನೆ ಬೆಳಿಗ್ಗೆಯಿಂದಲೇ ಸುರಿ ಯುತ್ತಿದೆ. ಕಳೆದ ಜೂನ್‌ನಲ್ಲಿ 994.6 ಮಿ. ಮೀ, ಜುಲೈನಲ್ಲಿ 1124.3 ಮಿ.ಮೀ, ಆಗಸ್ಟ್‌ನಲ್ಲಿ 1002.50 ಮಿಮೀ ಹಾಗೂ ಸೆಪ್ಟಂಬರ್‌ನಲ್ಲಿ ಈವರೆಗೂ 453.8 ಮಿಮೀ ಮಳೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮಳೆಯ ಪ್ರಮಾಣ ಜಾಸ್ತಿಯಾಗಿದೆ. ಸುಮಾರು 150 ಇಂಚು ಮಳೆ ಈವರೆಗೂ ಬಿದ್ದಿದೆ. ಕಳೆದ ವರ್ಷ ಒಟ್ಟು ಮಳೆಯ ಪ್ರಮಾಣ 3370.50 ಮಿಮೀ ನಷ್ಟು ಆಗಿತ್ತು. ಆದರೆ ಈ ವರ್ಷ ಈಗಾಗಲೇ ಇದರ ಪ್ರಮಾಣ ಜಾಸ್ತಿಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನರಸಿಂಹರಾಜಪುರ ಭಾರಿ ಮಳೆ
ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನದಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.
 ಗುರುವಾರ ಬೆಳಿಗ್ಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 2ಗಂಟೆಯಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲು ಪ್ರಾರಂಭಿಸಿದ್ದು ಸಂಜೆಯಾದರೂ ಸಹ  ಮಳೆ ಮುಂದವರಿದಿತ್ತು. ಗುರುವಾರ ಸಂಜೆ 6ಗಂಟೆವರೆಗೆ 25 ಮಿ.ಮೀ ಮಳೆಯಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT