ಮೂಡಿಗೆರೆ: ಭಾರತದ ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ಕೃಷಿ ನಿರತ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ವಲಯ ತೋಟಗಾರಿಕಾ ಮತ್ತು ಕೃಷಿ ಸಂಶೋಧನಾ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ.ಸುಕನ್ಯಾ ಅಭಿಪ್ರಾಯಪಟ್ಟರು.
ಪಟ್ಟಣದ ಛತ್ರಮೈದಾನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಚರಿಸಲಾದ ವಿಶ್ವ ಕೃಷಿ ನಿರತ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಕೃಷಿ ಕ್ಷೇತ್ರದಲ್ಲಿ ಇಂದಿಗೂ ಮಹಿಳೆಯರ ಪಾತ್ರ ಗಣನೀಯವಾಗಿದೆ. ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದರಿಂದ, ಕೃಷಿ ಕ್ಷೇತ್ರದ ಬೆಳವಣಿಗೆಯ ಜೊತೆಗೆ ಕುಟುಂಬದ ಆರ್ಥಿಕ ಮಟ್ಟದ ಹೆಚ್ಚಳಕ್ಕೂ ಕಾರಣವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಲಯ ತೋಟಗಾರಿಕಾ ಮತ್ತು ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಡಿ. ರಂಗಸ್ವಾಮಿ ಮಾತನಾಡಿ, ಪುರುಷನಿಗೆ ಸಮಾನವಾಗಿ ಮಹಿಳೆಯರು ಕಾರ್ಯನಿರ್ವಹಿಸಿದ ಮೊದಲ ಕ್ಷೇತ್ರ ಕೃಷಿ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿನ ಮಹಿಳೆಯರ ಪಾಲಿನಿಂದಾಗಿಯೇ ಕೃಷಿ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆಯತ್ತ ಸಾಗಲು ಸಹಕಾರಿಯಾಗಿದೆ, ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದಲ್ಲಿನ ಆರ್ಥಿಕ ಮಿತವ್ಯಯವನ್ನು ತಡೆಯಲು ಸಹಕಾರಿಯಾಗಿದ್ದು, ಕೃಷಿ ಕ್ಷೇತ್ರವು ದೀರ್ಘಾವಧಿ ಚಟುವಟಿಕೆಯನ್ನು ಹೊಂದಿಲ್ಲವಾದ್ದರಿಂದ ಬಿಡುವಿನ ವೇಳೆಯಲ್ಲಿ ಉಪ ಬೇಸಾಯದಲ್ಲಿ ತೊಡಗುವುದು ಅವಶ್ಯಕ, ಇದರಿಂದ ಬಿಡುವಿನ ವೇಳೆಯ ಸದುಪಯೋಗದೊಂದಿಗೆ, ಕುಟುಂಬದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಡಾ.ಗಿರೀಶ್ ಮಾತನಾಡಿ, ರೈತ ಮಹಿಳೆಯರು ತಮ್ಮ ಕೃಷಿ ಚಟುವಟಿಕೆ ಜೊತೆಯಲ್ಲಿಯೇ ಲಭ್ಯವಿರುವ ಭೂಮಿಯಲ್ಲಿ ಕೈ ತೋಟ, ತರಕಾರಿ ಬೆಳೆ, ಹೂವು ಹಣ್ಣುಗಳ ಬೆಳೆ, ಸಾವಯವ ಗೊಬ್ಬರ ತಯಾರಿಯಂತಹ ಚಟುವಟಿಕೆಯಲ್ಲಿ ತೊಡಗಿದರೆ ಕೃಷಿಯಲ್ಲಿ ಯಶಸ್ವಿ ಹೊಂದಲು ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ನಾಗರಾಜ ಗೋಂಕಾವಿ, ಮಧುಕಿರಣ್, ನರಸಿಂಹ ಮತ್ತು ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮಹಿಳೆಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.