ADVERTISEMENT

ನೀರಿನ ಸಂಪ್ ಶುಚಿಗೊಳಿಸುವಾಗ ಅವಘಡ: ಪ್ರಾಣ ಉಳಿಸಲು ಹೋದವರೇ ಪ್ರಾಣ ಕಳೆದುಕೊಂಡರು!

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 12:25 IST
Last Updated 28 ನವೆಂಬರ್ 2021, 12:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಡೂರು: ಪಟ್ಟಣದ ದೊಡ್ಡಪೇಟೆಯಲ್ಲಿ ಭಾನುವಾರ ನೀರಿನ ಸಂಪ್ ಶುಚಿಗೊಳಿಸಲು ಇಳಿದಿದ್ದ ಮೂವರಲ್ಲಿ ಇಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಸುಭಾಷ್ ನಗರದ ಕುಮಾರ್ (50) ಕಲ್ಲಾಪುರದ ವಸಂತ್ (35) ಮೃತರು. ತೀವ್ರ ಅಸ್ವಸ್ಥಗೊಂಡಿದ್ದ ಮೊಹಮದ್ ಖಯೂಂ ಎಂಬುವರನ್ನು ಚಿಕ್ಕಮಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಕುಮಾರ್ ಮೇಸ್ತ್ರಿ ಕೆಲಸ ಮಾಡುತ್ತಿದ್ದರು.

ದೊಡ್ಡಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಸಂಪ್ ಅನ್ನು ಶುಚಿಗೊಳಿಸಲು ಮೊದಲು ಖಯೂಂ ಇಳಿದಿದ್ದಾರೆ. ಉಸಿರುಗಟ್ಟಿ ಅವರು ಒದ್ದಾಡಲಾರಂಭಿಸಿದಾಗ ಕೂಡಲೇ ಕುಮಾರ್ ಮತ್ತು ವಸಂತ್‌ ಸಂಪ್‌ನ ಒಳಗೆ ಇಳಿದು ಖಯೂಂ ಅವರನ್ನು ಮೇಲೆತ್ತಿ ಪಾರುಮಾಡಿದ್ದಾರೆ. ಆದರೆ, ಅವರಿಬ್ಬರೂ ಸಂಪ್‌ ಒಳಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ADVERTISEMENT

ಘಟನೆ ಕುರಿತು ವಸಂತ್‌ ಅವರ ತಂದೆ ಮಹದೇವಪ್ಪ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್‌ಐ ರಮ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಶಾಸಕ ವೈ.ಎಸ್.ವಿ.ದತ್ತ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.