ಮೂಡಿಗೆರೆ: ತಾಲ್ಲೂಕಿನ ಕೋಳೂರು ಗ್ರಾಮದ ಬಡವನದಿಣ್ಣೆಯಲ್ಲಿ ಒತ್ತುವರಿಯಾಗಿರುವ ದಲಿತರ ಸ್ಮಶಾನವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದ ದಲಿತ ಮುಖಂಡ ಬಿ.ಬಿ. ಲಿಂಗರಾಜು ನೇತೃತ್ವದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಗ್ರಾಮಸ್ಥರು, ‘ಕೋಳೂರು ಗ್ರಾಮದ ಬಡವನದಿಣ್ಣೆಯ ಸರ್ವೆ ನಂ 173 ರಲ್ಲಿ ದಲಿತರ ಸ್ಮಶಾನಕ್ಕೆ ಮೀಸಲಿದ್ದ ಭೂಮಿಯನ್ನು, ಗ್ರಾಮದ ಆನಂದ್ ಎಂಬವರು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ, ತಹಶೀಲ್ದಾರರು ಮೀನಾಮೇಷ ಎಣಿಸುತ್ತಿದ್ದಾರೆ. ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಸಮಸ್ಯೆಯನ್ನು ಬಗೆಹರಿಸದಿದ್ದರೆ, 5ರಂದು ಮುಖ್ಯಮಂತ್ರಿಗಳಿಗೆ ಗ್ರಾಮದ ದಲಿತರೆಲ್ಲರೂ ತೆರಳಿ, ಮನವಿ ಸಲ್ಲಿಸಲಾಗುವುದು' ಎಂದರು.
‘ಒತ್ತುವರಿಯಾಗಿರುವ ಪ್ರದೇಶವು ಸರ್ಕಾರಿ ಸ್ಮಶಾನವಾಗಿದ್ದು, ಸ್ಮಶಾನಕ್ಕಾಗಿಯೇ ಬಳಸಲು ಗ್ರಾಮ ಪಂಚಾಯಿತಿಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲಿದ್ದ ಮರಗಳನ್ನು ಕಡಿತಲೆ ಮಾಡಿರುವುದರಿಂದ ಅರಣ್ಯ ಇಲಾಖೆಯಲ್ಲಿ ಒತ್ತುವರಿದಾರರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ’ ಎಂದರು.
ಒತ್ತುವರಿ ಪ್ರದೇಶವನ್ನು ಖುಲ್ಲಾ ಪಡಿಸುವಂತೆ ಸಾರ್ವಜನಿಕ ಸರ್ಕಾರಿ ಜಮೀನುಗಳ ನಿಗಮಕ್ಕೆ ದೂರು ನೀಡಿದ್ದು, ನಿಗಮವು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಆದೇಶಸಿದ್ದರೂ, ಇದುವರೆಗೂ ತಹಶೀಲ್ದಾರರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಗ್ರಾಮಸ್ಥರಿಗೆ ಅಂತ್ಯ ಸಂಸ್ಕಾರ ನಡೆಸಲು ಸ್ಮಶಾನ ಇಲ್ಲದಂತಾಗಿದ್ದು, ಕೂಡಲೇ ಖುಲ್ಲಾಗೊಳಿಸುವಂತೆ ತಹಶೀಲ್ದಾರರಿಗೆ ಮನವಿ ಮಾಡಿದರೆ, ಸಬೂಬುಗಳನ್ನು ಹೇಳಿ ರಾಜಿಮಾಡಿಕೊಳ್ಳುವಂತೆ ಒತ್ತಾಯಿಸುತ್ತಾರೆ ಎಂದು ಗ್ರಾಮಸ್ಥರು ದೂರಿದರು.
ಒಂದು ವೇಳೆ ಒತ್ತುವರಿಯಾಗಿರುವ ಸ್ಮಶಾನವನ್ನು ಖುಲ್ಲಾ ಪಡಿಸದಿದ್ದರೆ ಉಗ್ರ ಹೋರಾಟವನ್ನು ಕೂಡ ರೂಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ, ಹಾಲಯ್ಯ ಮುಂತಾದವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.