ADVERTISEMENT

ಜೆಡಿಎಸ್‌ನಿಂದ ರೈತರ ಆರ್ಥಿಕ ಸಬಲೀಕರಣ

ಶೃಂಗೇರಿ ವಿಧಾನಸಭಾ ಕ್ಷೇತ್ರ ಮಟ್ಟದ ಕುಮಾರಪರ್ವ ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 9:16 IST
Last Updated 15 ಜನವರಿ 2018, 9:16 IST
ಶೃಂಗೇರಿಯಲ್ಲಿ ಭಾನುವಾರ ನಡೆದ ಕ್ಷೇತ್ರಮಟ್ಟದ ಜೆಡಿಎಸ್ ಪಕ್ಷ ಆಯೋಜಿಸಿದ ಕುಮಾರಪರ್ವ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷ ರಾಜ್ಯ ಘಟಕ ಅಧ್ಯಕ್ಷ ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.
ಶೃಂಗೇರಿಯಲ್ಲಿ ಭಾನುವಾರ ನಡೆದ ಕ್ಷೇತ್ರಮಟ್ಟದ ಜೆಡಿಎಸ್ ಪಕ್ಷ ಆಯೋಜಿಸಿದ ಕುಮಾರಪರ್ವ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷ ರಾಜ್ಯ ಘಟಕ ಅಧ್ಯಕ್ಷ ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.   

ಶೃಂಗೇರಿ: ಜೆಡಿಎಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಜಿ.ವೆಂಟೇಶ್ ಗೆಲ್ಲಿಸಬಹುದು. ರಾಜ್ಯದಲ್ಲಿ ನಾವು ಸ್ವಂತಬಲದಿಂದ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಭರವಸೆ ನಮಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಶೃಂಗೇರಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಜೆಡಿಎಸ್‌ನಿಂದ ಕುಮಾರಪರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರಾವಳಿಯಲ್ಲಿ ಕೋಮುಗಲಭೆ ಹೆಚ್ಚುತ್ತಿದ್ದು, ಇದಕ್ಕೆ ಎರಡು ರಾಜಕೀಯ ಪಕ್ಷಗಳು ಕುಮ್ಮಕ್ಕು ನೀಡುತ್ತಿದ್ದು, ರಾಜ್ಯದಲ್ಲಿ ಯುವಕರ ಹತ್ಯೆ ಅವಿರತವಾಗಿ ನಡೆಯುತ್ತಿದ್ದು, ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯಧೋರಣೆ ಕಾರಣ. ಕಾಂಗ್ರೆಸ್ ಹಾಗೂ ಬಿಜೆಪಿಗಳನ್ನು ಹಿಂದಕ್ಕೆ ಸರಿಸಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಪ್ರಾದೇಶಿಕ ಪಕ್ಷಗಳಿಗೆ ಸ್ಥಳಿಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಅರಿವಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬೆಂಬಲಿಸಬೇಕು’ ಎಂದರು.

ADVERTISEMENT

ಶೃಂಗೇರಿ ಕ್ಷೇತ್ರ ಅತ್ಯಂತ ಪವಿತ್ರವಾದುದು. ಹೈದರಾಬಾದ್‌ ನಿಜಾಮರು ಶೃಂಗೇರಿ ಪೀಠಕ್ಕೆ ಗೌರವದಿಂದ ನಡೆಯುತ್ತಿದ್ದು, ಹಲವಾರು ಕೊಡುಗೆಯನ್ನು ಅವರು ನೀಡಿರುತ್ತಾರೆ.ಈ ಪವಿತ್ರ ಕ್ಷೇತ್ರವು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಮಾದರಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ‘ರಾಜ್ಯದಲ್ಲಿ ಕಾಂಗ್ರೆಸ್  ನಡೆಸುತ್ತಿರುವ ಸಾಧನಾ ಸಮಾವೇಶವು ಸರ್ಕಾರದ ಜನರ ತೆರಿಗೆ ಹಣದಿಂದ ನಡೆಯುತ್ತಿದ್ದು, ಚುನಾವಣಾ ಸಮೀಪದಲ್ಲಿ ಕಾಂಗ್ರೆಸ್ ಪಕ್ಷದವರು ಎಲ್ಲಾ ಕಡೆ ನೆಪ ಮಾತ್ರಕ್ಕೆ ಶಂಕುಸ್ಥಾಪನೆ ನಡೆಸುತ್ತಿದ್ದಾರೆ. ದಿನಪತ್ರಿಕೆಯಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿಲ್ಲದ ಕಾರ್ಯಗಳ ಬಗ್ಗೆ ಜಾಹೀರಾತು ನೀಡಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ನಾಯಕ ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಯಲ್ಲಿ ಅಧಿಕಾರ ಸಿಕ್ಕಿದ 24 ಗಂಟೆಗಳ ಒಳಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ರೈತರು ಸತತ ಬರಗಾಲದಿಂದ ಸಂಕಷ್ಟದಲ್ಲಿದ್ದು ₹56 ಸಾವಿರ ಕೋಟಿ ನಷ್ಟವನ್ನು ಅನುಭವಿಸಿದ್ದಾರೆ.  ಸರ್ಕಾರವು ಕೃಷಿಕರ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಸರ್ಕಾರ ಈಗಾಗಲೇ ಸಾಲಮನ್ನಾ ಮಾಡಿದ ಪೋಷಣೆ ಬರೀ ಪೋಷಣೆಯಾಗಿ ಉಳಿದಿದೆ ಎಂದರು.

ಮಲೆನಾಡಿನಲ್ಲಿ ಹಳದಿ ರೋಗದಿಂದ ತತ್ತರಿಸಿದ ರೈತರಿಗೆ ಗೋರಖ್‌ ಸಿಂಗ್ ವರದಿ ಜಾರಿಗೆ ತಂದಿಲ್ಲ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಅರ್ಥಿಕ ಸಬಲತೆಯನ್ನು ರೈತರಿಗೆ ನೀಡಲು ಶ್ರಮಿಸಲಾಗುವುದು. ರಾಜ್ಯ ಸರ್ಕಾರವು ಜನರಿಗೆ ಕಿವಿಗೆ ಹೂವು ಮೂಡಿಸುವ ಕೆಲಸ ನಿರ್ವಹಿಸುತ್ತಿದ್ದು, ನಮ್ಮ ಪಕ್ಷ ಸವಾಲುಗಳನ್ನು ಎದುರಿಸಿ ಸಮಸ್ಯೆಗೊಳಗಾದವರಿಗೆ ನ್ಯಾಯ ಒದಗಿಸುತ್ತದೆ’ ಎಂದರು.

ಇಂದಿನ ಸರ್ಕಾರವು ಆಯೋಜಿಸಿದ ಮಾತೃಪೂರ್ಣ ಯೋಜನೆಗವು ಸಮರ್ಪಕ ವಾಗಿದೆ.ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಗರ್ಭಿಣಿಯರಿಗೆ ಪೌಷ್ಠಿಕಾಂಶ ಆಹಾರ ಪಡೆಯಲು  6 ತಿಂಗಳಿಗೆ ₹36 ಸಾವಿರ ನೀಡಲು ಬದ್ಧರಿದ್ದೇವೆ. ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹5ಸಾವಿರ ಮಾಸಿಕ ಸಹಾಯ ಧನವನ್ನು ನೀಡಲಾಗುವುದು. ಗ್ರಾಮೀಣ ಪ್ರದೇಶ ಗಳಲ್ಲಿ ಅರಣ್ಯ ಇಲಾಖೆಗಳ ಮೂಲಕ ಹೆಚ್ಚಿನ ನಿರುದ್ಯೋಗದವರಿಗೆ ಉದ್ಯೋಗ ನೀಡಲಾಗುವುದು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ ಭಟ್ ವಹಿಸಿದರು. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ವಿಧಾನಸಭಾ ಸದಸ್ಯರಾದ ಕೋ.ನಾ.ರೆಡ್ಡಿ, ಶರವಣ ಶಾಸಕರಾದ  ಶ್ರೀಕಂಠೇಗೌಡ, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಶಾಸಕರಾದ
ಬಿ.ಬಿ.ನಿಂಗಯ್ಯ, ವೈ.ಎಸ್.ವಿ ದತ್ತ, ಜೆಡಿಎಸ್ ಮುಖಂಡರಾದ ಎಚ್,ಜಿ.ವೆಂಕಟೇಶ್, ಎಚ್.ಟಿ.ರಾಜೇಂದ್ರ, ಕೆ,ಎಸ್ ರಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಿ.ಜಿ.ಮಂಜುನಾಥ, ರಾಜ್ಯ ವಕ್ತಾರ ಎಸ್.ಎಲ್.ಬೋಜೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಯುವ ಜೆಡಿಎಸ್ ಕ್ಷೇತ್ರಾಧ್ಯಕ್ಷ ಭರತ್ ಗಿಣಿಕಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.