ADVERTISEMENT

ಬಾಣೂರು: ಆಕಸ್ಮಿಕ ಬೆಂಕಿಗೆ ಮನೆ, ಕೊಟ್ಟಿಗೆ ಭಸ್ಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 14:06 IST
Last Updated 1 ಆಗಸ್ಟ್ 2023, 14:06 IST
ಅಜ್ಜಂಪುರ ತಾಲ್ಲೂಕಿನ ಬಾಣೂರು ಗ್ರಾಮದಲ್ಲಿ ಬೆಂಕಿಯಿಂದ ಮನೆ ಸುಟ್ಟು ಭಸ್ಮವಾಗಿದೆ
ಅಜ್ಜಂಪುರ ತಾಲ್ಲೂಕಿನ ಬಾಣೂರು ಗ್ರಾಮದಲ್ಲಿ ಬೆಂಕಿಯಿಂದ ಮನೆ ಸುಟ್ಟು ಭಸ್ಮವಾಗಿದೆ   

ಅಜ್ಜಂಪುರ: ತಾಲ್ಲೂಕಿನ ಶಿವನಿ ಹೋಬಳಿಯ ಬಾಣೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಮನೆ, ಒಂದು ದನದ ಕೊಟ್ಟಿಗೆ, ಕೊಬ್ಬರಿ ಶೆಡ್ ಸುಟ್ಟು ಕರಕಲಾಗಿವೆ. ಕೊಟ್ಟಿಗೆಯಲ್ಲಿದ್ದ ಎರಡು ಎಮ್ಮೆ, ಒಂದು ಕುರಿ ಸಾವನ್ನಪ್ಪಿವೆ.

ಬಾಣೂರು ಗ್ರಾಮದ ಹನುಮಂತಪ್ಪ(71) ಸೋಮವಾರ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಮನೆ ಮಂದಿ ತೆರಳಿದ್ದ ವೇಳೆ, ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ಜ್ವಾಲೆಯಿಂದ ಮನೆಯಲ್ಲಿದ್ದ ಸಿಲಿಂಡರ್‌ ಸ್ಫೋಗೊಂಡಿದೆ. ಇದರಿಂದ ಬೆಂಕಿ ಮತ್ತಷ್ಟು ಉಲ್ಬಣಿಸಿ, ಹೆಚ್ಚು ಹಾನಿ ಸಂಭವಿಸಿದೆ.

‘ತಂದೆಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದೆವು. ಬೆಂಕಿ ಹೇಗೆ ತಗುಲಿತೋ ಗೊತ್ತಿಲ್ಲ. ಮನೆಗೆ ವಾಪಸ್‌ ಬರುವಷ್ಟರಲ್ಲಿ  ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು, ಕೊಟ್ಟಿಗೆ, ಕೊಟ್ಟಿಗೆಯಲ್ಲಿದ್ದ ಎಮ್ಮೆಗಳು, ಕುರಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಹಿಸಿವೆ. ಉಳಿದುಕೊಳ್ಳಲು, ಬೇಯಿಸಿಕೊಂಡು ತಿನ್ನಲು ಏನೂ ಉಳಿದಿಲ್ಲ ಎಂದು ಮೃತರ ಮಗ ಕರಿಯಪ್ಪ ನೋವಿನಿಂದ ನುಡಿದರು. 

ADVERTISEMENT

‘ಮನೆ ಕಟ್ಟಲು ಹಣ ಹೊಂದಿಸಿಟ್ಟಿದ್ದೆ. ಮನೆ ನಿರ್ಮಾಣಕ್ಕಾಗಿ ಸಾಗುವಾನಿ, ಬೇವಿನ ಮರ ಸಿದ್ದಗೊಳಿಸಿ ಇರಿಸಿದ್ದೆ. ಅವೆಲ್ಲವೂ ಸುಟ್ಟು ಹೋಗಿವೆ. ಟಿವಿ, ಕಪಾಟು, ಮಂಚ, ದಿನಸಿ, ಬಟ್ಟೆ ಎಲ್ಲವೂ ಬೆಂಕಿಗೆ ಆಹುತಿಯಾಗಿದ್ದು, ದಿಕ್ಕೇ ತೋಚದಂತಾಗಿದೆ. ಸಂಬಂಧಪಟ್ಟವರು ಪರಿಹಾರ ನೀಡಬೇಕು’ ಎಂದು ಮನೆ ಮಾಲೀಕ ವೆಂಕಟೇಶಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.