ADVERTISEMENT

ಚಿಕ್ಕಮಗಳೂರು| ಆರ್ಥಿಕತೆಯಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರ; ಕೃಷ್ಣೇಗೌಡ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:32 IST
Last Updated 9 ಫೆಬ್ರುವರಿ 2026, 7:32 IST
ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನ ಆದಿಚುಂಚನಗಿರಿ ಪಾಲಿಟೆಕ್ನಿಕ್ ವತಿಯಿಂದ ಇನ್ಸ್ಪಿರೋ 2ಕೆ26 ಕಾರ್ಯಕ್ರಮ ನಡೆಯಿತು
ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನ ಆದಿಚುಂಚನಗಿರಿ ಪಾಲಿಟೆಕ್ನಿಕ್ ವತಿಯಿಂದ ಇನ್ಸ್ಪಿರೋ 2ಕೆ26 ಕಾರ್ಯಕ್ರಮ ನಡೆಯಿತು   

ಚಿಕ್ಕಮಗಳೂರು: ಭಾರತ ಇಂದು ಜಾಗತಿಕ ಆರ್ಥಿಕ ಶಕ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲು ಎಂಜಿನಿಯರ್‌ಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದರು.

ನಗರದ ಎಐಟಿ ಕಾಲೇಜಿನ ಆದಿಚುಂಚನಗಿರಿ ಪಾಲಿಟೆಕ್ನಿಕ್ ವತಿಯಿಂದ ಆಯೋಜಿಸಿದ್ದ ‘ಇನ್ಸ್ಪಿರೋ–2ಕೆ26’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛಲ ಹಾಗೂ ಪರಿಶ್ರಮವಿದ್ದರೆ ಗುರಿ ಸಾಧನೆ ಸಾಧ್ಯ. ಹಿಂದುಳಿದ ವರ್ಗದಿಂದ ಬಂದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿದ್ದು, ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವುದು ಇದಕ್ಕೆ ಉದಾಹರಣೆ. ದೇಶಭಕ್ತಿ ಮತ್ತು ನಿರಂತರ ಶ್ರಮವೇ ಯಶಸ್ಸಿನ ಮೂಲ ಎಂದು ಹೇಳಿದರು.

ADVERTISEMENT

ವಿಜ್ಞಾನವಿಲ್ಲದೇ ಜಗತ್ತು ಮುನ್ನಡೆಯುವುದಿಲ್ಲ. ಡಿಪ್ಲೊಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಎಂಜಿನಿಯರ್ ಆಗುವ ಅವಕಾಶವಿದೆ. ಮೊಬೈಲ್ ಫೋನ್‌ ತಂತ್ರಜ್ಞಾನದಲ್ಲಿ ಒಳ್ಳೆಯದು–ಕೆಟ್ಟದ್ದು ಎರಡೂ ಇವೆ. ಉತ್ತಮ ಅಂಶಗಳನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಉಪಯುಕ್ತರಾಗಬೇಕು. ತಕ್ಷಣ ಹಣ ಗಳಿಸುವ ಮನೋಭಾವ ಬಿಟ್ಟು ಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು.

ಎಐಟಿ ಕಾಲೇಜಿನ ಪ್ರಾಂಶುಪಾಲ ಸಿ.ಟಿ. ಜಯದೇವ್ ಮಾತನಾಡಿ, ವಾರ್ಷಿಕೋತ್ಸವಗಳು ಕೇವಲ ಸಮಾರಂಭವಲ್ಲ, ವಿದ್ಯಾರ್ಥಿಗಳ ಶಿಸ್ತು, ಕಲಿಕೆ ಮತ್ತು ವ್ಯಕ್ತಿತ್ವ ನಿರ್ಮಾಣದ ಅವಲೋಕನವಾಗಿವೆ ಎಂದರು.

ಗಣಿತ ಕಠಿಣವೆಂಬ ಭಾವನೆ ತಪ್ಪು. ಗಣಿತವಿಲ್ಲದೇ ಜೀವನ ಸಾಧ್ಯವಿಲ್ಲ. ಡಿಪ್ಲೊಮಾ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಕಲಿಯಬೇಕು. ವಿದ್ಯಾರ್ಥಿಗಳು ಕೌಶಲ, ಸೃಜನಶೀಲತೆ ಮತ್ತು ಆವಿಷ್ಕಾರ ಮನೋಭಾವ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಪರಂಪರೆ ಮತ್ತು ಸಂಸ್ಕೃತಿಯನ್ನೂ ಸಮಾನವಾಗಿ ಅಳವಡಿಸಿಕೊಳ್ಳಬೇಕು. ಜ್ಞಾನವೇ ಶ್ರೇಷ್ಠವಾದ ಸಂಪತ್ತು ಎಂದು ಹೇಳಿದರು. 

‌ಕಾರ್ಯಕ್ರಮದಲ್ಲಿ ಎಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಎಂ. ಸಚಿನ್, ಹಿರಿಯ ಉಪನ್ಯಾಸಕಿ ವಿ.ಕೆ. ಮಧುರ, ಉಪನ್ಯಾಸಕ ಸಾಯಿ ನಂದನ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.