ಆಲ್ದೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಬುಧವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕವೀಶ್ ಎಚ್.ಎಸ್ ಮಾತನಾಡಿ, ಸಂಘವು ₹35.22 ಲಕ್ಷ ಲಾಭ ಗಳಿಸಿದ್ದು, ಸದಸ್ಯರ ಖಾತೆಗೆ ಶೇ 11ರಷ್ಟು ಡಿವಿಡೆಂಡ್ ಅನ್ನು ಪಾವತಿಸಲಾಗುವುದು. ಸಂಘದ ಅಭಿವೃದ್ಧಿಗೆ ಸಾಲ ಪಡೆದ ಸದಸ್ಯರು ಸಕಾಲಕ್ಕೆ ಮರುಪಾವತಿ ಮಾಡಿದ್ದಾರೆ. ನಿರ್ದೇಶಕರು, ಸದಸ್ಯರ ಸಲಹೆ, ಸಿಬ್ಬಂದಿ ಪರಿಶ್ರಮ ಯಶಸ್ಸಿಗೆ ಕಾರಣವಾಗಿದೆ ಎಂದರು.
ನಿಯಮಕ್ಕೆ ಅನುಗುಣವಾಗಿ ಸಂಘದ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು. ಸದಸ್ಯರ ಸಾಲದ ಮಿತಿ ₹5 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಬಂದಿದೆ. ಡಿಸಿಸಿ ಬ್ಯಾಂಕ್, ನಬಾರ್ಡ್ನಿಂದ ಹಣ ಬಿಡುಗಡೆ ಆಗಿಲ್ಲ. ಶೀಘ್ರ ಹಣ ಬಿಡುಗಡೆ ಆಗುವ ಸಾಧ್ಯತೆ ಇದ್ದು, ಅವಕಾಶ ಇದ್ದರೆ ಸಾಲದ ಮೊತ್ತ ಹೆಚ್ಚಿಸಲಾಗುವುದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ ಆಗಿರುವುದರಿಂದ, ನಿಯಮದಂತೆ ಸಾಲ ವಿತರಿಸಲಾಗುತ್ತದೆ ಎಂದು ಹೇಳಿದರು.
ಗೊಬ್ಬರ ಪೂರೈಕೆಯನ್ನು ಸಮಗ್ರವಾಗಿ ನಿಭಾಯಿಸಲಾಗಿದ್ದು 1,200ಕ್ಕೂ ಅಧಿಕ ಮೂಟೆಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಭಾರಿ ಕಾರ್ಯನಿರ್ವಾಹಕಿ ಅನ್ನಪೂರ್ಣ ಎಂ.ಎಂ ವಾರ್ಷಿಕ ವರದಿ ಮಂಡಿಸಿದರು.
ಉಪಾಧ್ಯಕ್ಷ ದೇವರಾಜ್, ನಿರ್ದೇಶಕರಾದ ಕೌಶಿಕ್ ಎ.ಡಿ, ಎಚ್.ಪಿ, ನಾರಾಯಣಗೌಡ, ಎಚ್.ಆರ್, ಸಂದೇಶ, ಡಿ.ಆರ್, ದಿಲೀಪ್ ಕುಮಾರ್, ಎಚ್.ಬಿ, ವೆಂಕಟೇಶ್ ಗೌಡ, ಡಿ.ಎಂ, ವಿನೋದ, ಚಂಪಾ ಜಗದೀಶ್, ಹೂವಪ್ಪ ಶೆಟ್ಟಿ, ಚನ್ನಪ್ಪ, ಸುದರ್ಶನ್ ಬಿ.ಎಂ, ಮಾರಾಟ ಗುಮಾಸ್ತರಾದ ಶಿವಪ್ಪ ಎ.ಎಚ್, ಎಚ್.ಪಿ, ಸತ್ಯನ್, ಸಿಬ್ಬಂದಿ ಸುದೀನ್, ನವಮಿ, ಸುರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.