ಆಲ್ದೂರು: ನಿರಂತರ ಮಳೆ ಯಿಂದಾಗಿ ಆವತಿ ಹೋಬಳಿಯ ಬಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಐದಳ್ಳಿ ಮತ್ತು ಆನಿಗನಹಳ್ಳಿ ಕಾಫಿ ತೋಟಗಳಲ್ಲಿ ಕೊಳೆ ರೋಗದ ಆತಂಕ ಎದುರಾಗಿದೆ.
ಐದಳ್ಳಿಯ ಪರಮೇಶ್ ತೋಟದಲ್ಲಿ 500ಕ್ಕೂ ಹೆಚ್ಚು ರೋಬಸ್ಟಾ ತಳಿಯ ಕಾಫಿ ಗಿಡಗಳು ಕೊಳೆರೋಗಕ್ಕೆ ತುತ್ತಾಗಿವೆ. ಕಣತಿಯ ಆನಿಗನಹಳ್ಳಿ ಗ್ರಾಮದ ಕೃಷ್ಣ ಅವರ 4 ಎಕರೆ ತೋಟದಲ್ಲಿ 700ಕ್ಕೂ ಹೆಚ್ಚು ಕಾಫಿ ಗಿಡಗಳು ಕೊಳೆರೋಗಕ್ಕೆ ತುತ್ತಾಗಿವೆ.
ಅಕ್ಕ ಪಕ್ಕದಲ್ಲಿರುವ ಬಹುಪಾಲು ಕಾಫಿ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ಕಾಫಿ ಬೆಳೆಗಾರರು ಬೆಳೆ ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ.
ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿಸರ್ಕಾರವು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದು ಬೆಳೆಗಾರರ ಐದಳ್ಳಿ ಪರಮೇಶ್, ಆನಿಗನಹಳ್ಳಿ ಕೃಷ್ಣ ಕೆ.ಕೆ. ಒತ್ತಾಯಿಸಿದ್ದಾರೆ.
ಕಾಫಿ ಮಂಡಳಿ ಕಾರ್ಯದರ್ಶಿ ಡಾ.ಕೆ ಜಿ ಜಗದೀಶ್ ಮಾತನಾಡಿ, ‘ಕಾಫಿ ಬೆಳೆ ನಷ್ಟದ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ. ಮಳೆ ನಿಂತ ಕೂಡಲೇ ಸರಿಯಾದ ಸಮಯಕ್ಕೆ ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.