ADVERTISEMENT

ಎಂ.ಸಿ. ಹಳ್ಳಿ: ಅಕ್ರಮ ಕಟ್ಟಡ ನಿರ್ಮಾಣ, ದೂರು ದಾಖಲು

ಭದ್ರಾ ಪುನರ್ವಸತಿಗಾಗಿ ಕಾಯ್ದಿರಿಸಿರುವ ಜಾಗ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 2:17 IST
Last Updated 25 ಮಾರ್ಚ್ 2021, 2:17 IST
ತರೀಕೆರೆ ತಾಲ್ಲೂಕಿನ ಎ।ಂ.ಸಿ.ಹಳ್ಳಿಯಲ್ಲಿ ಕಾಮಗಾರಿ ಹಂತದಲ್ಲಿರುವ ಕಟ್ಟಡ.
ತರೀಕೆರೆ ತಾಲ್ಲೂಕಿನ ಎ।ಂ.ಸಿ.ಹಳ್ಳಿಯಲ್ಲಿ ಕಾಮಗಾರಿ ಹಂತದಲ್ಲಿರುವ ಕಟ್ಟಡ.   

ಚಿಕ್ಕಮಗಳೂರು: ‘ಜಿಲ್ಲೆಯ ತರೀಕೆರೆ ತಾಲ್ಲೂಕಿನ ಎಂ.ಸಿ. ಹಳ್ಳಿಯಲ್ಲಿ ಭದ್ರಾ ಪುನರ್ವಸತಿಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರಿದಿದೆ, ತೆರವುಗೊಳಿಸಲು ಕ್ರಮವಹಿಸಬೇಕು’ ಜಿಲ್ಲಾಧಿಕಾರಿಗೆ ಎಂದು ಭದ್ರಾ ಪುನರ್ವಸತಿ ಸಂತ್ರಸ್ತ ಕೆ.ಜಿ.ಕೇಶವ ದೂರು ನೀಡಿದ್ದಾರೆ.

‘ಗ್ರಾಮದ ಸರ್ವೆ ನಂ 442ರ 22.14 ಎಕರೆ ಜಾಗವನ್ನು ಭದ್ರಾ ಪುನರ್ವಸತಿಗೆ (ಸಾರ್ವಜನಿಕ ಉದ್ದೇಶಕ್ಕೆ) ಕಾಯ್ದಿರಿಸಲಾಗಿದೆ. ಗ್ರಾಮದವರೊಬ್ಬರು ಈ ಜಾಗದ 30X30 ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ. ಕಟ್ಟಡ ನಿರ್ಮಿಸುತ್ತಿರುವವ ವಿರುದ್ಧ ತಹಶೀಲ್ದಾರ್‌ ದೂರು ದಾಖಲಿಸುವಂತೆ ತರೀಕೆರೆ ತಹಶೀಲ್ದಾರ್‌ ಅವರು ತರೀಕೆರೆ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರಿಗೆ ಫೆ.6ರಂದು ಪತ್ರ ಬರೆದಿದ್ದಾರೆ. ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ತರೀಕೆರೆ ಉಪವಿಭಾಗಾಧಿಕಾರಿ ಗಮನ ಸೆಳದರೂ ಪ್ರಯೋಜವಾಗಿಲ್ಲ. ಕಟ್ಟಡ ಕಾಮಗಾರಿ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕಟ್ಟಡ ನಿರ್ಮಿಸುತ್ತಿರುವವರು ಪ್ರಭಾವಿಗಳು. ಗ್ರಾಮ ಪಂಚಾಯಿತಿಯ ಕೆಲ ಅಧಿಕಾರಿಗಳು, ಸದಸ್ಯರು ಅವರ ಜತೆ ಶಾಮೀಲಾಗಿರುವ ಗುಮಾನಿ ಇದೆ. ಪ್ರಭಾವ ಬಳಸಿ ನಮ್ಮ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡಬೇಕು. ನಿರ್ಮಾಣ ಹಂತದಲ್ಲಿರುವ ಅಕ್ರಮ ಕಟ್ಟಡ ತೆರವುಗೊಳಿಸಲು ಕ್ರಮ ವಹಿಸಬೇಕು. ಅಕ್ರಮದಲ್ಲಿ ಶಾಮೀಲಾಗಿರುವವರ ವಿರುದ್ಧವೂ ಕ್ರಮ ಜರುಗಿಸಬೇಕು. ಸರ್ಕಾರಿ ಜಾಗವನ್ನು ರಕ್ಷಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಸ್ಥಳ ಪರಿಶೀಲಿಸಿ ಕ್ರಮ: ತಹಶೀಲ್ದಾರ್‌
‘ಕಟ್ಟಡ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತರೀಕೆರೆ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ, ಆವರು ಎಫ್‌ಐಆರ್ ಮಾಡಿಲ್ಲ’ ಎಂದು ತಹಶೀಲ್ದಾರ್‌ ಗೀತಾ ತಿಳಿಸಿದರು.

‘ಗುರುವಾರ ಸ್ಥಳ ಪರಿಶೀಲನೆ ಮಾಡುತ್ತೇವೆ. ಭೂಕಬಳಿಕೆ ದೂರು ದಾಖಲಿಸಲು ಗಮನ ಹರಿಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.