ಚಿಕ್ಕಮಗಳೂರು: ‘ರಾಜ್ಯದಲ್ಲಿ ಈ ವರ್ಷ 100 ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡಗಳನ್ನು ₹ 200 ಕೋಟಿ ನಿರ್ಮಿಸಲಾಗುತ್ತಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘₹ 50 ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕ ಠಾಣೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಪೊಲೀಸರಿಗೆ 10 ಸಾವಿರ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈ ಬಾಬ್ತಿಗೆ ₹ 2 ಸಾವಿರ ಕೋಟಿ ಮೀಸಲಿಡಲಾಗಿದೆ. ಪೊಲೀಸರಿಗೆ ಸುಸಜ್ಜಿತವಾದ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು.
‘ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಒಗ್ಗೂಡಿ ಸ್ಪರ್ಧಿಸಿದ್ದವು. ಚುನಾವಣೆಯಲ್ಲಿ ಗೆದ್ದ ನಂತರ ಎಂಟು ಪಕ್ಷಗಳ ತಂಡ ಮಾಡಿಕೊಂಡು ಬಿಜೆಪಿಯಿಂದ ದೂರಾಯಿತು. ಬಹಳ ದಿನ ಅವರ ಮೈತ್ರಿ ಇರಲ್ಲ ಅನಿಸಿತ್ತು. ಈಗ ಅದು ಆಗಿದೆ. ಬೆಳವಣಿಗೆಗಳನ್ನು ಕಾದು ನೋಡುತ್ತೇವೆ. ’ ಎಂದು ಉತ್ತರಿಸಿದರು.
‘ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದನ್ನು ಚುನಾವಣಾ ಗಿಮಿಕ್ ಎಂದು ಸಿದ್ದರಾಮಯ್ಯ ಹೇಳಿದ್ದರೆ ಒಪ್ಪಲಾಗದು. ವಿರೋಧ ಪಕ್ಷದವರಾಗಿ ಟೀಕೆ ಮಾಡಬೇಕು ಎಂದು ಟೀಕೆ ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.