ADVERTISEMENT

ಎಲೆಚುಕ್ಕಿ ರೋಗಕ್ಕೆ ಎಕರೆಗೆ ₹5 ಲಕ್ಷ ಪರಿಹಾರಕ್ಕೆ ಆಗ್ರಹ

ಅಡಿಕೆಗೆ ಎಲೆಚುಕ್ಕಿ ರೋಗ: ಅಧಿವೇಶನದಲ್ಲಿ ಪರಿಹಾರ ಘೋಷಿಸದಿದ್ದರೆ ಸ್ವಯಂಪ್ರೇರಿತ ಬಂದ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 5:58 IST
Last Updated 20 ಡಿಸೆಂಬರ್ 2022, 5:58 IST
ಅಡಿಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ಘೋಷಿಸುವಂತೆ ಒತ್ತಾಯಿಸಿ ಮಲೆನಾಡು ಜನಪರ ಒಕ್ಕೂಟದ ಸದಸ್ಯರು ತಹಶೀಲ್ದಾರ್ ಗೌರಮ್ಮ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು
ಅಡಿಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ಘೋಷಿಸುವಂತೆ ಒತ್ತಾಯಿಸಿ ಮಲೆನಾಡು ಜನಪರ ಒಕ್ಕೂಟದ ಸದಸ್ಯರು ತಹಶೀಲ್ದಾರ್ ಗೌರಮ್ಮ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು   

ಶೃಂಗೇರಿ: `ಎಲೆ ಚುಕ್ಕಿ ರೋಗದಿಂದ ತತ್ತರಿಸಿರುವ ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಸರ್ಕಾರ ಎಕರೆಗೆ ₹5 ಲಕ್ಷ ಪರಿಹಾರ ಮತ್ತು ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‍ ಅನ್ನು ಬೆಳಗಾವಿ ಅಧಿವೇಶನದಲ್ಲಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ, ಶೃಂಗೇರಿ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತ ಬಂದ್ ಹಾಗೂ ಪಾದಯಾತ್ರೆ ಹಮ್ಮಿಕೋಳ್ಳುತ್ತೇವೆ’ ಎಂದು ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಹೇಳಿದರು.

ಅಡಿಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ಒದಗಿಸಬೇಕು ಮತ್ತು ಅರಣ್ಯ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮಲೆನಾಡು ಜನಪರ ಒಕ್ಕೂಟದಿಂದ ಶೃಂಗೇರಿಯ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೌರಮ್ಮ ಅವರ ಮೂಲಕ ಸರ್ಕಾರ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

‘ಮಲೆನಾಡಿನ ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಭಾಗಗಳಲ್ಲಿ ಅಡಿಕೆ ಕೃಷಿಯೇ ಜೀವನಾಧರ ಎಂದು ನಂಬಿಕೊಂಡಿದ್ದ ಕೃಷಿಕರು ಮತ್ತು ಕಾರ್ಮಿಕರು ಕಂಗಾಲಾಗಿದ್ದಾರೆ. ಕೃಷಿಕರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಕಂದಾಯ ಭೂಮಿಯಲ್ಲಿ ಸೆಕ್ಷನ್ 4(1) ಅರಣ್ಯ ಎಂದು ಅಧಿಸೂಚನೆ ಆಗಿದ್ದು, ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸ್ಥಳಕ್ಕೆ ಬಂದು, ಇಲ್ಲಿ ವಾಸವಿರುವ ಮನೆಗಳು ಹಾಗೂ ಕೃಷಿ ಭೂಮಿಯನ್ನು ಹೊರತು ಪಡಿಸಿ, ಉಳಿದದ್ದು ಅರಣ್ಯ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರಿಗೆ ಹಕ್ಕು ಪತ್ರ ನೀಡಲು ಅನುವು ಮಾಡಿಕೊಡಬೇಕು. ಬಗರ್ ಹುಕುಂ ಸಾಗುವಳಿ ಮಂಜೂರಿಗೆ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಬೇಕು. ರಾಜ್ಯ ಸರ್ಕಾರದ ಆದೇಶ ಹಿಂಪಡೆಯಬೇಕು. ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ಸದಸ್ಯ ಜಗದೀಶ್ ಕಣದಮನೆ ಮಾತನಾಡಿ, ‘ಬಡವರನ್ನು ಒಕ್ಕಲೆಬ್ಬಿಸುವ ಮಾರಕ ಅರಣ್ಯ ಕಾಯ್ದೆ ಜಾರಿಯನ್ನು ತಡೆಯಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಹಕ್ಕು ಪತ್ರ ನೀಡಿರುವುದನ್ನು ಪಹಣಿಯಲ್ಲಿ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಸಂತೋಷ್ ಕಾಳ್ಯ, ಅವಿನಾಶ್, ಆಶಿಕ್ , ತ್ರಿಮೂರ್ತಿ, ನೂತನ್ ಹೆಗ್ಡೆ, ವಿಜೇಂದ್ರ ಹಿಂಬಿಗೆ, ರಾಜ್‍ಕುಮಾರ್ ಹೆಗ್ಡೆ, ನಾಗರಾಜ್, ಪ್ರದೀಪ್ ಕಲ್ಲಾಳಿ, ನಾಗನ್ ಕುಪ್ಪನಮಕ್ಕಿ, ಪ್ರತೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.