ADVERTISEMENT

ಮೂಡಿಗೆರೆ: ಕ್ರೈಸ್ತರಿಂದ ವಿಭೂತಿ ಬುಧವಾರ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:10 IST
Last Updated 19 ಫೆಬ್ರುವರಿ 2026, 3:10 IST
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ವಿಭೂತಿ ಬುಧವಾರ ಆಚರಣೆಯ ಪೂಜೆಯಲ್ಲಿ ಫಾ. ಅರುಣ್ ಲೋಬೊ ಭಕ್ತರ ಹಣೆಗೆ ವಿಭೂತಿ ಹಚ್ಚಿದರು
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ವಿಭೂತಿ ಬುಧವಾರ ಆಚರಣೆಯ ಪೂಜೆಯಲ್ಲಿ ಫಾ. ಅರುಣ್ ಲೋಬೊ ಭಕ್ತರ ಹಣೆಗೆ ವಿಭೂತಿ ಹಚ್ಚಿದರು   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಬುಧವಾರ ಕ್ರೈಸ್ತ ಸಮುದಾಯದವರು ವಿಭೂತಿ ಬುಧವಾರವನ್ನು ಆಚರಿಸಿದರು.

ಪಟ್ಟಣದ ಸೇಂಟ್‌ ಅಂತೋಣಿ ಚರ್ಚ್ ಸೇರಿದಂತೆ ಗೋಣಿಬೀಡಿನ ಕಸ್ಕೇಬೈಲ್, ಬಣಕಲ್, ಕೊಟ್ಟಿಗೆಹಾರ, ಜಾವಳಿ ಬಾಳೂರು, ಕೆಳಗೂರು, ಹಿರೇಬೈಲ್, ಕೂವೆ ಸುತ್ತಮುತ್ತಲ ಚರ್ಚ್‌ಗಳಲ್ಲಿ ಗುಡ್ ಫ್ರೈಡೇ ಪ್ರಯುಕ್ತ 42 ದಿನಗಳ ಕಾಲ ನಡೆಯುವ ವ್ರತ ಆಚರಣೆಗಾಗಿ ವಿಭೂತಿ ಬುಧವಾರ ಆಚರಿಸಿದರು.

ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಬಣಕಲ್ ವಿಮುಕ್ತಿ ಚಾರಿಟಬಲ್ ಟ್ರಸ್ಟಿನ ನಿರ್ದೇಶಕ ಫಾ. ಅರುಣ್ ಲೋಬೊ ವಿಶೇಷ ಪೂಜೆ ಅರ್ಪಿಸಿ ಮಾತನಾಡಿ, ‘ಉಪವಾಸ ಮಾಡಿ ದಂಡನೆ ಮಾಡುವುದಲ್ಲದೆ, ಬಡವ ಬಲ್ಲಿದರಿಗೆ ದಾನ ಧರ್ಮ ಮಾಡುವ ಮೂಲಕ ನಾವು ಜೀವನ ಕಳೆಯಬೇಕು. ಇತರರ ಕಷ್ಟದಲ್ಲಿ ಭಾಗಿಯಾಗಿ ಸಮಾಜದಲ್ಲಿ ದುಃಖಿತರಾದವರಿಗೆ ಸಾಂತ್ವನ ಹೇಳುವುದು ಕೂಡ ನಾವು ಮಾಡುವ ಒಳ್ಳೆ ಕಾರ್ಯಗಳಾಗಿವೆ. ಪಾಪದಿಂದ ವಿಮುಕ್ತರಾಗಿ ತಪಸ್ಸು ಕಾಲದಲ್ಲಿ ಯೇಸುವಿನ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು’ ಎಂದರು.

ADVERTISEMENT

ಬಣಕಲ್ ಬಾಲಿಕಾ ಮರಿಯ ಚರ್ಚ್‌ನಲ್ಲಿ ಫಾ. ಪ್ರೇಮ್ ಲಾರೆನ್ಸ್ ಡಿಸೋಜ ಸಂದೇಶ ನೀಡಿ, ‘ಯೇಸುಕ್ರಿಸ್ತರು ನಮ್ಮ ಪಾಪಕ್ಕಾಗಿ ಶಿಲುಬೆ ಮೇಲೆ ಮರಣ ಹೊಂದಿ ತ್ಯಾಗಮಯ ಜೀವನವನ್ನು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಪ್ರೀತಿ, ತ್ಯಾಗದ ಮೂಲಕ ಪಾಪ ವಿಮುಕ್ತ ಜೀವನ ನಡೆಸಬೇಕು. ದುಶ್ಚಟಗಳನ್ನು ದೂರ ಮಾಡಿ ನೈಜವಾದ ಕ್ರೈಸ್ತ ಜೀವನದ ದಾರಿಯಲ್ಲಿ ನಡೆದು ನಾವು ಪರರಿಗೆ ಆದರ್ಶರಾಗಬೇಕು’ ಎಂದರು.

ಎಲ್ಲಾ ಚರ್ಚ್‌ಗಳಲ್ಲಿ ಉಪವಾಸ ವ್ರತ, ದಂಡನೆ ಪ್ರಯುಕ್ತ ಗುರುಗಳು ಭಕ್ತಾದಿಗಳ ಹಣೆಗೆ ವಿಭೂತಿ ಬಳಿದು ಯೇಸುವಿನ ಮರಣದ ಕರಾಳ ದಿನಕ್ಕೆ ಚಾಲನೆ ನೀಡಿದರು. ಚರ್ಚ್‌ಗಳಲ್ಲಿ ಭಕ್ತಾದಿಗಳು ಸೇರಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.