
ತರೀಕೆರೆ: ರಂಗೇನಹಳ್ಳಿ ಗ್ರಾಮದ ಡಾಂಬರ್ ರಸ್ತೆಯ ಮಧ್ಯಭಾಗದಲ್ಲಿ ಹಾದುಹೋಗುತ್ತಿರುವ ಭದ್ರಾ ಜಲಾಶಯ–ಹೊಸದುರ್ಗ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಾಮಗಾರಿ ಆರಂಭವಾಗಿ ತಿಂಗಳಾದರೂ ಪೂರ್ಣಗೊಳ್ಳದೆ ಭಾರಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಅವಧಿಯಲ್ಲಿ ಸಾಮಗ್ರಿ ತುಂಬಿದ್ದ ಆರು ಲಾರಿಗಳು ರಸ್ತೆಯಲ್ಲಿ ಹೂತು ಹೋಗಿ ಸಮಸ್ಯೆ ಉಂಟಾಗಿತ್ತು. ದ್ವಿಚಕ್ರ ಮತ್ತು ಲಘು ವಾಹನ ಸಂಚಾರಕ್ಕೂ ತೊಡಕಾಗಿದೆ.
ಲೋಕೋಪಯೋಗಿ ಇಲಾಖೆ ನಿಯಮಾನುಸಾರ ರಸ್ತೆ ಅಗೆದ ಬಳಿಕ ತಕ್ಷಣ ಪೈಪ್ ಅಳವಡಿಸಿ, ಮಣ್ಣು ಮುಚ್ಚಿ ಸಮತಟ್ಟು ಮಾಡಬೇಕು. ಆದರೆ, ಗುತ್ತುಗೆದಾರರು ಈ ನಿಯಮಗಳನ್ನು ಪಾಲಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆಯ ಅವ್ಯವಸ್ಥೆಯಿಂದ ಬೀದಿ ಬದಿ ವ್ಯಾಪಾರಿಗಳು, ಶಾಲಾ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ಹಲವು ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ಗ್ರಾಮದ ಮುಖ್ಯರಸ್ತೆಯ ಮಧ್ಯದಲ್ಲೇ ಕಾಮಗಾರಿ ನಡೆಸಿ ತಿಂಗಳಾದರೂ ಸರಿಪಡಿಸದಿರುವುದು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನ ಎಂದು ಹೋರಾಟಗಾರ ಬಾಲು ಗುರುಪುರ ದೂರಿದ್ದಾರೆ. ಶೀಘ್ರದಲ್ಲಿ ರಸ್ತೆ ಸರಿಪಡಿಸದಿದ್ದರೆ ಗ್ರಾಮಸ್ಥರು ಒಟ್ಟಾಗಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತರೀಕೆರೆ ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್, ಕಾಮಗಾರಿ ನಡೆದ ಸ್ಥಳ ಕಿರಿದಾಗಿದ್ದು, ಅನಾಹುತ ಸಂಭವಿಸದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಹೂತು ಹೋಗಿದ್ದ ಲಾರಿಗಳನ್ನು ಗುತ್ತಿಗೆದಾರರ ಮೂಲಕ ತೆರವುಗೊಳಿಸಲಾಗಿದೆ. ರಸ್ತೆ ಸರಿಪಡಿಸಲು ರೋಲರ್ ಮತ್ತು ಕಾಂಪ್ಯಾಕ್ಟ್ ವಾಹನಗಳನ್ನು ಬಳಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.