ಕೊಪ್ಪ: ‘ಡಿ.ಎನ್.ಜೀವರಾಜ್ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ 2,700ಕ್ಕಿಂತ ಹೆಚ್ಚು ರೈತರಿಗೆ ಹಕ್ಕು ಪತ್ರಗಳನ್ನು ನೀಡಿದ್ದರು. ಟಿ.ಡಿ.ರಾಜೇಗೌಡ ಅವರು ಶಾಸಕರಾಗಿ ನಾಲ್ಕು ವರ್ಷ ಕಳೆದರೂ ಹಕ್ಕುಪತ್ರಗಳಿಗೆ ಪಹಣಿ, ಖಾತೆ ಮಾಡಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ’ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಶಾಸಕರ ವೈಫಲ್ಯತೆಯನ್ನು ಖಂಡಿಸಿ ಹಾಗೂ ತಾಲ್ಲೂಕಿನ ಹಕ್ಕುಪತ್ರ ವಂಚಿತ ರೈತರೊಂದಿಗೆ ಜುಲೈ 4ರಂದು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಇಂಧನ ಸಚಿವ ವಿ.ಸುನಿಲ್ ಕುಮಾರ್ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
‘ಫಾರಂ 53, 57ರಲ್ಲಿ ಹಕ್ಕುಪತ್ರಕ್ಕಾಗಿ ಸಾಕಷ್ಟು ಜನ ಈಗಾಗಲೇ ಹಣ ಕಟ್ಟಿದ್ದಾರೆ. ಆದರೆ, ಹಕ್ಕುಪತ್ರ ನೀಡಿಲ್ಲ. ಕೆಲವರನ್ನು ಖುದ್ದಾಗಿ ನಾನೇ ಶಾಸಕರ ಬಳಿ ಕರೆದೊಯ್ದು ಈ ವಿಷಯ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ತಾಲ್ಲೂಕು ಕಚೇರಿಯಲ್ಲಿ ಪ್ರತಿ ಕೆಲಸಕ್ಕೂ ಕಮಿಷನ್ ನೀಡಬೇಕಾಗಿದ್ದು, ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ನೀಡಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿದ್ದರೂ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ, ಅವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ' ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.