ADVERTISEMENT

ಮತದಾರರು ಆಮಿಷಗಳಿಗೆ ಮರುಳಾಗದಿರಿ: ಸಚಿವ ಕೆ.ಎಸ್. ಈಶ್ವರಪ್ಪ

ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಜನಸ್ವರಾಜ್ ಯಾತ್ರೆ, ಮತದಾರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 4:50 IST
Last Updated 19 ನವೆಂಬರ್ 2021, 4:50 IST
ಸಮಾವೇಷದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು.
ಸಮಾವೇಷದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು.   

ಚಿಕ್ಕಮಗಳೂರು: ವಿಧಾನಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆ ಮತದಾರರು ಆಮಿಷಗಳಿಗೆ ಮರುಳಾಗಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.

ಬಿಜೆಪಿ ವತಿಯಿಂದ ನಗರದ ಒಕ್ಕಲಿಗರ ಸಮುದಾಯಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜನ ಸ್ವರಾಜ್ ಯಾತ್ರೆಗೆ ಚಾಲನೆ ಹಾಗೂ ವಿಧಾನಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆ ಮತದಾರರ ಸಮಾವೇಶದಲ್ಲಿ ಮಾತನಾಡಿದರು.

ವಿಧಾನಪರಿಷತ್ ಚುನಾವಣೆ ಮತದಾರರು ಜಾತಿ, ಹಣದ ಪ್ರಭಾವಕ್ಕೆ ಒಳಗಾಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಬೇಕು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಕೇಂದ್ರ ಸರ್ಕಾರ ಜಲಜೀವನ್ ಯೋಜನೆ ಜಾರಿಗೊಳಿಸಿವೆ. ಯೋಜನೆಯಡಿ 2024ರೊಳಗೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ನೀಡಲಾಗುವುದು. ಗ್ರಾಮಪಂಚಾಯಿತಿ ಕಚೇರಿಗಳಲ್ಲಿನ ವಿದ್ಯುತ್ ಸಮಸ್ಯೆ ನಿವಾರಿಸಲು ಸೋಲಾರ್‌ ವ್ಯವಸ್ಥೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಮಾತನಾಡಿ, ಕೇಂದ್ರ ಹಾಗೂ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಗ್ರಾಮಪಂಚಾಯಿತಿಗೆ ನೇರವಾಗಿ ಅನುದಾನ ನೀಡುತ್ತಿದೆ. ಸರ್ಕಾರದ ಜನಪರ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕಂದಾಯ ಸಚಿವ ಆರ್‌.ಅಶೋಕ್ ಮಾತನಾಡಿ, ಕಾಂಗ್ರೆಸ್ ನಾವಿಕನಿಲ್ಲದ ಹಡಗಿನಂತಾಗಿದ್ದು, ರಂಧ್ರ ಮಾಡುವವರೆ ಜಾಸ್ತಿಯಾಗಿದ್ದಾರೆ. ಅವರು ಬ್ರಿಟಿಷರ ಒಡೆದಾಳುವ ನೀತಿಯಿಂದ ಇನ್ನೂ ಹೊರಬಂದಿಲ್ಲ. ಕಾಂಗ್ರೆಸ್ ಮುಖಂಡರು ಅವರ ಅಭ್ಯರ್ಥಿ ಪರ ಮಾತಯಾಚಿಸುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ತೆಗೆಳುವುದರಲ್ಲೆ ಸಮಯ ಕಳೆಯುತ್ತಾರೆ’ ಎಂದು ಟೀಕಿಸಿದರು.

ಸಂಸದ ಡಿ.ವಿ. ಸದಾನಂದಗೌಡ ಮಾತನಾಡಿ, ಪ್ರಧಾನಿ ಮೋದಿ ಅವರು ಗ್ರಾಮಪಂಚಾಯಿತಿ ಸದಸ್ಯರೇ ದೇಶದ ಭವಿಷ್ಯದ ನಿರ್ಮಾತೃಗಳೆಂದು ಭಾವಿಸಿದ್ದಾರೆ. ಗ್ರಾಮೀಣ ಜನರ ಆರೋಗ್ಯ ರಕ್ಷೆಗೆ ಸಾವಿರಾರು ಕೋಟಿ ಮೀಸಲಿಟ್ಟಿದ್ದಾರೆ. ನೂತನ ಶಿಕ್ಷಣ ನೀತಿ ಜಾರಿಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದ್ದಾರೆ ಎಂದರು.

ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮುಖಂಡರಾದ ಶಂಕರಪ್ಪ, ವಿನಯ್‌ ಬಿದರಿ, ಚೆನ್ನಬಸಪ್ಪ, ರವೀಂದ್ರಬೆಳವಾಡಿ, ಸಿ.ಆರ್.ಪ್ರೇಂಕುಮಾರ್, ಮಧುಕುಮಾರ ರಾಜ್‌ಅರಸ್, ದೀಪಕ್‌ದೊಡ್ಡಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.