
ತರೀಕೆರೆ: ಇಂದು ಪ್ರಪಂಚದ ಹಲವು ರಾಷ್ಟ್ರಗಳು ಭಾರತೀಯ ಸಂಸ್ಖೃತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿನ ಜನರು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ ಎಂದು ನಿವೃತ್ತ ಬ್ರಿಗೇಡಿಯರ್ ಕಂದಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತರೀಕೆರೆ ತಾಲ್ಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಈ ಬಗ್ಗೆ ಭಾರತೀಯ ಸೇನೆಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಾವು ಯೂತ್ ಫಾರ್ ನೇಷನ್ ಮತ್ತು ಸ್ವದೇಶಿ ಜಾಗರಣ (ಬೆಂಗಳೂರು ಮತ್ತು ಗ್ರಾಮೀಣ ಕರ್ನಾಟಕ) ಸಂಘಟನೆಗಳ ಆಶ್ರಯದಲ್ಲಿ ಸ್ವದೇಶಿ ವಸ್ತುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಜಾಗತಿಕವಾಗಿ ವಿದೇಶಿ ವಸ್ತುಗಳು ದಿನದಿಂದ ದಿನಕ್ಕೆ ವ್ಯಾಪಕವಾಗಿ ಬರುತ್ತಿದ್ದು, ಇದರಿಂದ ಭಾರತೀಯ ಆರ್ಥಿಕ ಮಟ್ಟ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಅಂದರೆ ಆತ್ಮನಿರ್ಭರತೆ, ಸ್ವದೇಶಿ ಉದ್ಯಮಶೀಲತೆ ಉತ್ತೇಜಿಸುವುದು ನಮ್ಮ ಕರ್ತವ್ಯವೂ ಆಗಿದೆ. ದೇಶೀಯ ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸುವುದು ರಾಷ್ಟ್ರೀಯ ಕಾರ್ಯತಂತ್ರವೂ ಆಗಿದೆ ಎಂದರು.
ಭಗವಾನ್ ಮಾತನಾಡಿ, ಜನಚಿಂತನ ಸಂಸ್ಥೆಯ ಎನ್.ವೀರಭದ್ರಪ್ಪ, ದಸಂಸ ಮುಖಂಡ ಎನ್.ವೆಂಕಟೇಶ ಮಾತನಾಡಿದರು. ಜಾಥಾ ತಂಡದಲ್ಲಿ ರಮೇಶ್ ನರಸಪ್ಪ, ಜಿ.ಎಂ. ವೇದಮೂರ್ತಿ, ಗೋಪಿನಾಥ್ ಪಿಳ್ಳೆ, ಜಗನಾಥ, ಬಾಬು, ಶಾಂತ, ಸಾಗರ್, ಹೇಮಂತ್ ಜಾದವ್ ಇದ್ದರು.
ತರೀಕೆರೆ ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಿಲ್ಟ್ರಿ ಶ್ರೀನಿವಾಸ್ ನಿರೂಪಿಸಿದರು. ಸಂಘದ ದೇವೇಂದ್ರಪ್ಪ, ಗೋವಿಂದಪ್ಪ, ಕುಮಾರ, ಸಿದ್ದಪ್ಪ, ಕ್ಯಾ.ಪಾಲಾಕ್ಷಪ್ಪ, ಜಗನ್ನಾಥ, ಸಗಾಯಂ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.