ADVERTISEMENT

ಬಸ್ ನಿಲ್ದಾಣದಲ್ಲಿ ಗುಂಡಿ: ಬಸ್ ಆಕ್ಸಿಲ್ ತುಂಡು 

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 17:38 IST
Last Updated 31 ಆಗಸ್ಟ್ 2018, 17:38 IST
ಬಾಳೆಹೊನ್ನೂರಿನ ಬಸ್ ನಿಲ್ದಾಣದ ಗುಂಡಿಗೆ ಇಳಿದ ಬಸ್‌ನ ಆಕ್ಸಿಲ್ ತುಂಡಾದ ಕಾರಣ ಪ್ರಯಾಣಿಕರು ಪರದಾಡಿದರು.              
ಬಾಳೆಹೊನ್ನೂರಿನ ಬಸ್ ನಿಲ್ದಾಣದ ಗುಂಡಿಗೆ ಇಳಿದ ಬಸ್‌ನ ಆಕ್ಸಿಲ್ ತುಂಡಾದ ಕಾರಣ ಪ್ರಯಾಣಿಕರು ಪರದಾಡಿದರು.                 

ಬಾಳೆಹೊನ್ನೂರು: ಪಟ್ಟಣದ ಬಸ್ ನಿಲ್ದಾಣದ ಕೆಸರು ಗುಂಡಿಗೆ ಇಳಿದ ಬಸ್‌ನ ಆಕ್ಸಿಲ್ ತುಂಡಾದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಪಟ್ಟಣದ ಬಸ್ ನಿಲ್ದಾಣದ ಅರ್ಧ ಕಾಂಕ್ರೀಟ್ ಹಾಗೂ ಉಳಿದರ್ಧ ಹದಗೆಟ್ಟ ಡಾಂಬರಿನಿಂದ ಕೂಡಿದ್ದು, ಬಸ್‌ಗಳು ಹಾಗೂ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದರೂ ಇಲ್ಲಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಶುಕ್ರವಾರ ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಿಲ್ದಾಣದ ಒಳಗೆ ಬಂದು ನಿಲ್ಲಿಸಲು ಮುಂದಾಗುತ್ತಿದ್ದಂತೆ ಕೆಸರಿನ ಹೊಂಡದಲ್ಲಿ ಚಕ್ರಗಳು ದಿಢೀರ್ ಹೂತು ಹೋದವು. ಬಸ್ ಅನ್ನು ಮೇಲೆ ತರಲು ಯತ್ನಿಸುತ್ತಿದ್ದ ವೇಳೆ ಅದರ ಆಕ್ಸಿಲ್ ತುಂಡಾಗಿ ಮುಂದೆ ಚಲಿಸದಾಯಿತು. ಇದರಿಂದಾಗಿ ಶೃಂಗೇರಿಗೆ ಕಡೆಗೆ ಹೊರಟಿದ್ದ ಪ್ರಯಾಣಿಕರನ್ನು ಇಲ್ಲಿಯೇ ಇಳಿಸಿ ಬೇರೆ ಬಸ್ ಗಳ ಮೂಲಕ ಕಳುಹಿಸಲಾಯಿತು.

ADVERTISEMENT

ಇಲ್ಲಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ಕೆಸರಿನ ಹೊಂಡಕ್ಕೆ ಕನಿಷ್ಟ ಮರಳು ಹಾಕುವ ಯತ್ನವನ್ನೂ ಮಾಡುತ್ತಿಲ್ಲ. ನಿತ್ಯ ಬಸ್ ಗಳನ್ನು ಎಲ್ಲಿ ನಿಲ್ಲಿಸುವುದು ಎಂಬುವುದೇ ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಸ್ ಚಾಲಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.